ಪ್ರತಿವರುಷ ಏಪ್ರಿಲ್ - ಮೇ ತಿಂಗಳಲ್ಲಿ ಬಿಸಿಲು ಬಿರುಸಾಗಿ, ನಮ್ಮ ಕರಾವಳಿಯ ಹವೆಯಲ್ಲಿ ಬೆವರಿಳಿಸಿ
ಸಾಕಾಗಿ, ಜೂನ್ ತಿಂಗಳ ಮೊದಲವಾರಕ್ಕೆ ಶುರುವಾಗುವ ಮಳೆಗಾಲಕ್ಕೆ ಚಾತಕ ಪಕ್ಷಿಯಂತೆ
ಕಾಯುವುದಾಗುತ್ತದೆ. ಮುಂಗಾರು ಅಂಡಮಾನಿಗೆ ಬಂತು, ಕೇರಳ ತಲುಪಿತು, ಮುಂತಾದ ಸುದ್ದಿಯನ್ನು
ಪತ್ರಿಕೆಗಳಲ್ಲಿ ನೋಡುತ್ತಿದ್ದಂತೆ ಮಳೆಯ ನಿರೀಕ್ಷೆ ಪ್ರಾರಂಭವಾಗುತ್ತದೆ. ಮಳೆ ಒಂದು ವಿಶೇಷವೇನಲ್ಲ.
ಪ್ರತಿ ವರುಷದ ಅನುಭವ. ಆದರೂ ಮುಂಗಾರಿನ ಮೊದಲ ಮಳೆಬಿದ್ದಾಗ ಅದೇನೋ ಸಂಭ್ರಮ.
ರಾತ್ರಿ ಹೊತ್ತು ಮಳೆಬಿದ್ದು ಎಚ್ಚರವಾದರೂ ಸಹ ಸದ್ದು ಕೇಳಿದ ತಕ್ಷಣ ಸಂಭ್ರಮದಿಂದ ಎದ್ದು ಕಿಟಕಿಯಬಳಿ
ನಿಂತು ಮಳೆಬೀಳುವುದನ್ನು ನೋಡಿ ಸಂತೋಷಪಡುತ್ತೇನೆ.
ನಮ್ಮ ಜೀವನ ಶೈಲಿ, ಮತ್ತು ಪರಿಸರದೊಡನೆ ನಾವು ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದಾಗ,
ಯಾವಾಗ ಪ್ರಕೃತಿ ಮುನಿದು ಮಳೆ ಬೆಳೆಗಳೇ ನಿಂತುಹೋಗುವವೋ ಎಂಬ ಭೀತಿ ನನಗೆ. ಅದರಿಂದಲೇ
ಕಾಲಕ್ಕೆ ತಕ್ಕಂತೆ ಮಳೆಬಿದ್ದಾಗ, ಪ್ರಕೃತಿದೇವಿ ಮತ್ತೊಮ್ಮೆ ನಮ್ಮನ್ನು ಕ್ಷಮಿಸಿ ದಯಮಾಡಿದಳೇನೋ ಎಂಬ
ಭಾವನೆ ಮೂಡುತ್ತದೆ. ಮನ ಹಗುರವಾಗುತ್ತದೆ. ಅದರಿಂದಲೇ ಅಷ್ಟು ಸಂಭ್ರಮ.
ರಾತ್ರಿ ಕನಸೋ ಎಂಬಂತೆ
ಕೊಂಚ ಮಳೆ ಬಿದ್ದ ಶಬ್ದ
ಅಷ್ಟೆ, ಇನ್ನೇನಿಲ್ಲ
ಮತ್ತೆಲ್ಲಾ ಸ್ತಬ್ಧ
ಮುಂಜಾನೆ ಬಾನಮುಚ್ಚಿತ್ತು
ದಟ್ಟ ಮೋಡದ ತೆರೆ
ಜತೆಗೆ ಸುರಿಯುತ್ತಲಿತ್ತು
ಬಿರುಮಳೆಯ ಧಾರೆ
ವರುಷದಿಂದ ಕವಿದಿದ್ದ
ಕೊಳೆಧೂಳು ತೊಳೆದು
ಹರುಷದಿಂದ ಹಸಿರೆಲೆಗಳು
ನಲಿದು ಹಚ್ಚಗೆ ಹೊಳೆದು
ಹಾಡುಹಕ್ಕಿಗಳು ಗೂಡೊಳಗೆ
ಮುದುಡಿ ಬೆಚ್ಚಗೆ ಮುಚ್ಚಿ
ಮಂಡೂಕ ಮಿಲನಗಾನ
ಹಾಡುತಿರೆ ಮನಬಿಚ್ಚಿ
ತಂಪಾಗಿತ್ತು ಬೆಂದು
ಹಬೆಯಾಡುತ್ತಿದ್ದ ಇಳೆ
ಮತ್ತೊಮ್ಮೆ ನಮ್ಮೂರಿಗೆ ಬಂತು
ಮುಂಗಾರಿನ ಮಳೆ !