Sunday 28 August 2022

ಮಳೆಯ ಮುಂಜಾನೆ and ಗೌರಿ ಹಬ್ಬ




ಐದಕ್ಕೆ ನಿದ್ದೆ ಹರಿಯಿತು, ಎದ್ದೆ 

ಹೊರಗೆ ನೆಲ, ಗಿಡ, ಗೋಡೆ ಎಲ್ಲ ಒದ್ದೆ 


ಮಳೆ ನಿಂತಿತೋ, ಇಲ್ಲವೋ ಜಿಜ್ಞಾಸೆ 

ಛತ್ರಿ ಹಿಡಿದು ಹೋಗಬಹುದೇನೋ? ಆಸೆ 


ಫ್ಲೈ ಓವರ್ ನ ಬದಿಗೆ ದೋಸೆಮಾರುವವ 

ದೋಸೆಮಾರಿದ ಫ್ಲೈ ಓವರ್ ನ ಕೆಳಗೆ ನಿಂದು

ದೋಸೆ ತಿನ್ನುವವರು, ಅವರ ಸ್ಕೂಟರು ಕಾರುಗಳು ತುಂಬಿ 

ನನ್ನ ರಸ್ತೆಯಾಯಿತು ಬಂದು !  


ಪಾರ್ಕಿನಲ್ಲಿ ದೀಪಗಳಿಗೆ ರಜೆ 

ಕತ್ತಲಲ್ಲಿ ಜಾರಿಬಿದ್ದರೆ ತಿಂಗಳ ಕಾಲ ಸಜೆ 


ನೀರಿನ ಭಾರಕ್ಕೆ ವಾಲಿದ ಕೊಂಬೆಗಳಡಿ 

ನಿಧಾನಕ್ಕೆ ನಡೆದೆ 

ಶಿವ ಲಿಂಗದ ಮೇಲೆ ತೊಟ್ಟು ತೊಟ್ಟೆಂದು ಬೀಳುವ 

ಅಭೀಶೇಕದ ಅನುಭವ ಪಡೆದೆ 

 

ಕೊಂಚಹೊತ್ತಿಗೆ ಬೆಳಕಾದಾಗ ಪಶ್ಚಿಮದಿಗಂತದಲ್ಲಿ 

ಗುಂಪು ಗುಂಪು ಬಿಳಿ ಮೋಡಸಾಲು 

ಸಮುದ್ರತೀರದಲ್ಲಿ ಒಂದರಮೇಲೊಂದು ಏರಿ ಬರುವ 

ಅಲೆಗಳದೇ ಚಾಲು 

ಕೆಲವೇ ಕ್ಷಣಗಳಲ್ಲಿ ಪೂರ್ವದಲ್ಲಿ ಸೂರ್ಯನ ಇಣುಕು 

ಸುತ್ತಲಿನ ಗಿಡ, ಮರ, ಗೋಡೆಗಳಮೇಲೆಲ್ಲಾ 

ಬಂಗಾರದ ಬೆಳಕು !





ಗೌರಿ ಹಬ್ಬ 




ನಮ್ಮ ಓದುವ ಮೇಜನ್ನು 

ತಲೆಕೆಳಗು ಮಾಡಿದರೆ 

ಅದರ ನಾಲ್ಕು ಕಾಲಾಯಿತು 

ನಾಲ್ಕು ಕಂಭ 


ಮುಂದಿನ ಎರಡು ಕಾಲಿಗೆ 

ಕಟ್ಟಿದೆವು 

ಬಾಳೆ ಕಂಭ 


ಮೇಲೆ ತೋರಣ ಕಟ್ಟಿ 

ಮಧ್ಯದಲ್ಲಿ ಕುಳ್ಳಿರಿಸಿದೆವು 

ಸ್ವರ್ಣ ಗೌರಿಯ ಬಿಂಬ 


ಅರಿಸಿನ ಕುಂಕುಮ 

ಹೊಳೆವ ವರ್ತಿ ವಸ್ತ್ರ,

ಮಲ್ಲಿಗೆ, ಸೇವಂತಿಗೆ, 

ಮುಂದೆ ತಟ್ಟೆ ತುಂಬ. 


ಕೆಂಪು ಹಸಿರು ಬಳೆಗಳು 

ರೇಷ್ಮೆ ಸೀರೆಯುಟ್ಟು 

ಪೂಜೆಗೆ ಕುಳಿತ 

ಅಮ್ಮನ ಕೈತುಂಬ 


ಪೂಜೆ ಮುಗಿದಂತೆ 

ಒರಳು, ಒನಕೆ 

ಕಾವಲಿ, ಡಬರಿ 

ಸೌಟು ಸಟ್ಟುಗದ ಸದ್ದು 

ಅಡಿಗೆಯ ಮನೆತುಂಬ 


ಘಮ್ಮನೆ ಬೇಯುವ 

ಹೋಳಿಗೆಯ ಸುವಾಸನೆ 

ನಮ್ಮ ಮೂಗಿನ ತುಂಬ 


ಅಡಿಗೆ ಯಾದೊಡನೆ 

ನೈವೇದ್ಯ ತೋರಿಸಿ 

ಉಂಡರೆ ಹೊಟ್ಟೆ ತುಂಬಾ 


ಎಲ್ಲಿ ಕುಳಿತರಲ್ಲೇ 

ತೂಕಡಿಸಿ ಜೊಂಪು 

ಕಣ್ಣ ತುಂಬ


ನಮ್ಮ ಚಿಕ್ಕಂದಿನ 

ಭಾದ್ರಪದ ತದಿಗೆಯ 

ಚಿತ್ರ, ಮುದ,

ಈಗಲೂ ಮನದ ತುಂಬ!

Saturday 13 August 2022

ಬಾಯಲಿ ಹರಿನಾಮ, ಹೃದಯದಿ ಶ್ರೀರಾಮ .....


ಮಂತ್ರಾಲಯ ಪ್ರಭುಗಳು, ರಾಘವೇಂದ್ರಸ್ವಾಮಿಗಳು, ಗುರುರಾಯರು, ಅಥವಾ ಬರಿದೇ

‘ರಾಯ’ರೆಂದರೂ ‘ಓ’ಗೊಡುವ ಶ್ರೀ ರಾಘವೇಂದ್ರ ತೀರ್ಥರನ್ನುದ್ದೇಶಿಸಿ ನಾನು ಬರೆದ ಒಂದು

ಗೀತೆ ಇದು. ಲೋಕಾರೂಢಿಯಲ್ಲಿ, ‘ನಾನು ಬರೆದೆ’ ಎಂದರೆ, ಕೇಳಿದವರು  ಒಪ್ಪಿಯಾರು.

ಆದರೆ ರಾಯರು ಇದನ್ನು ಸರ್ವಥಾ ಒಪ್ಪಲಾರರು. ಅವರು ಒಪ್ಪಬೇಕಾದರೆ ಮೇಲಿನ

ವಾಕ್ಯವನ್ನು “ದೇಶಕಾಲಾಧಿಪತಿ, ದೇಹೇಂದ್ರಿಯಾಧಿಪತಿ ಶ್ರೀ ರಾಮಚಂದ್ರ ದೇವರ

ಪ್ರೇರಣೆ ಹಾಗೂ ಆಜ್ಞೆ ಯಂತೆ ಶ್ರೀ ಮುಖ್ಯಪ್ರಾಣದೇವರು ಕೃಪೆಮಾಡಿ ನನ್ನೊಳಗಿದ್ದು

ನನ್ನಿಂದ ಬರೆಸಿದ ಗೀತೆ” ಎಂದೇ ಬರೆಯಬೇಕು !  ಆದ್ದರಿಂದ, ಪ್ರಾಣದೇವರು ನನ್ನಿಂದ ಬರೆಸಿ,

ಹಾಡಿಸಿದ ಗೀತೆ ಇದು. ರಾಯರ ಆರಾಧನೆಯ ಸಂಧರ್ಭದಲ್ಲಿ, ಶ್ರೀ ರಾಘವೇಂದ್ರ

ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ

ಸ್ವಾಮಿಯ ಪ್ರೀತ್ಯರ್ಥವಾಗಿ. 


ಬಾಯಲಿ ಹರಿನಾಮ ಹೃದಯದಿ ಶ್ರೀರಾಮ 

ಶಿರದಲಿ ಪೂರ್ಣಬೋಧ ವಿಚಾರಧಾಮ   


ಕರದಲಿ ದಂಡ ಕಮಂಡಲ ಮಾಲ 

ಕರಕಮಲಾರ್ಚಿತ ಕೌಸಲ್ಯಾ ಬಾಲ 

ಕರುಣೆಯ ಸೂಸುವ ಕೃಪಾಕಟಾಕ್ಷ 

ಕರಜೋಡಿಸೆ ಗುರು ಕಲ್ಪವೃಕ್ಷ 


ಸತ್ಯ ಧರ್ಮ ಸಚ್ಚಾರಿತ್ರ್ಯ ನೇಮ

ಸಂತತ ಜಪಿಸುತ ಶ್ರೀರಾಮನಾಮ 

ಸಚ್ಚಾಸ್ತ್ರ ಸಂಗೀತ ಕಲೆಯಲ್ಲಿ ಪ್ರೇಮ 

ಸದ್ಭಕ್ತರ ಸಂತತ ಪಾಲಿಪ ನಾಮ


ಭವ್ಯಾಕೃತಿ, ರಕ್ತಾಂಬರ ಧಾರಿ 

ಭಕ್ತರಿಗೆ ತೋರಿ ಹರಿಯತ್ತ ದಾರಿ 

ಭಕ್ತಿಭಾವ ನಿಂತಂತೆ ಮೈತಳೆದು 

ಭವಲೋಕವ ದಾಟಿಸೋ ಕೈಪಿಡಿದು 


ಅನುದಿನ ನೆರೆವುದು ಭಕ್ತ ಸಮೂಹ 

ಆರದು ನಿನ್ನಯ ಸೇವೆಯ ದಾಹ  

ತುಂಗಾತಟ ಮಂತ್ರಾಲಯವಾಸ 

ನಿನ್ನ ಚರಣ, ಎನ್ನ ಶಿರಕೆ ಆವಾಸ 





ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...