ಹಾವಿನ ಹಾಸಿಗೆಯ
ಶೇಷ ಶಯನ
ಎಲ್ಲರ ಅಪ್ಪ, ತಿಮ್ಮಪ್ಪ
ಹುಲಿ ಸವಾರಿಯ
ಮಲೆ ಮಹಾದೇವ
ಕರುಳಹಾರದ
ಉಗ್ರ ನರಸಿಂಹ
ಬೆಟ್ಟ ಹೊತ್ತ ಕೃಷ್ಣ
ಬೆಣ್ಣೆ ಕದ್ದ ಕೃಷ್ಣ
ಗೀತಾ ಬೋಧಕ ಕೃಷ್ಣ
ಕಾಳಿಂಗ ಮರ್ದನ ಕೃಷ್ಣ
ಬನಶಂಕರಿ, ಚೌಡೇಶ್ವರಿ,
ಹನುಮಾನ, ಗಜಾನನ
ಶಾಕಾಂಬರಿ,ರಕ್ತಾಂಬರೀ
ಪೀತಾಂಬರ ಧಾರಿಗಳು
ನಮ್ಮ ಮನೆಗಳ
ಗೋಡೆಗಳಲ್ಲಿ
ಮಾಡ,ಗೂಡುಗಳಲ್ಲಿ
ದೇವರ ಕೋಣೆಗಳಲ್ಲಿ,
ಹೂ ಹಾರ, ಮಣಿ ಹಾರ
ಮತ್ತಿತರ ಅಲಂಕಾರ
ಅಗರಬತ್ತಿ, ಆರತಿ
ಸಪ್ರೀತಿ ಸನ್ಮಾನದಿಂದ
ಕಾಲ ಕಳೆಯುತ್ತಿದ್ದರು
ಬಲುಸುಖದಿಂದ.
ವರುಷಗಳು ಸರಿದು
ಪಟಗಳು ಹರಿದು
ಕಟ್ಟುಮುರಿದೋ
ಬಣ್ಣಗೆಟ್ಟೋ
ತೆಪ್ಪಗಿರಿಸಲುಬೇಡ
ತಿಪ್ಪೆಗೆಸೆಯಲುಬೇಡವಾಗಿ
ಕಳಿಸಿದ್ದೇವೆ ಅವರನ್ನೂ,
ಫುಟಪಾತ್ ಪಕ್ಕದ
ಪಾರ್ಕಿನ ಕಟಕಟೆಯ
ಆಸರೆಯ ಆಶ್ರಮಕ್ಕೆ !
ಕೈಲಾಸವಾಸಿಯಾದರೂ
ಕಾಲಾಯ ತಸ್ಮೈ ನಮಃ!