ಪೂಜ್ಯ ಬನ್ನಂಜೆಯವರ ಒಂದು ಪ್ರವಚನದ ಭಾಗವಾಗಿರುವ “ಭಗವಂತನಿಗೆ ಯಾವ ಪುಷ್ಪ ಅರ್ಪಿಸಬೇಕು”
ಎಂಬ ಏಳು ನಿಮಿಷದ ಸಣ್ಣ ವಿಡಿಯೋದ ತುಣುಕನ್ನು ಸ್ನೇಹಿತರೊಬ್ಬರು ಕಳಿಸಿದ್ದರು. ಅದನ್ನು ಕೇಳಿದ
ನಂತರ ಅದರ ಸಾರಾಂಶವನ್ನು ಒಂದು ಪದ್ಯ ರೂಪದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ.
ಶ್ರೀ ಕೃಷ್ಣನಿಗೆ ಪ್ರಿಯವಂತೆ ಪಾರಿಜಾತ, ತುಳಸಿದಳ
ನಿರ್ಗುಣಿ ಶಿವನಿಗೆ ಸಾಕೊಂದು ಬಿಳಿಯ ಹೂ ಬಿಲ್ವದಳ
ದೇವಿಗಾದರೆ ಬೇಕಲ್ಲ ಪೀತಾಂಬರ, ಕನಕಾಂಬರ
ಗಣಪನಿಗಿರಬೇಕು ಕೆಂಪು ಹೂ, ಗರಿಕೆ, ಸಿಂಧೂರ
ಹೀಗೆಲ್ಲಾ ನಮ್ಮ ಭಾವನೆಗಳು
ಗಿಟ್ಟಬೇಕಲ್ಲವೇ ನಮ್ಮ ಕಾಮನೆಗಳು ?
ಪುಷ್ಪ ಯಾವುದತಿಯೋಗ್ಯ ಭಗವಂತನ ಪೂಜೆಗೆ ?
ಪ್ರಶ್ನೆಯೊಂದು ಹಾರಿಬಂತು ಪೂಜ್ಯ ಆಚಾರ್ಯರೆಡೆಗೆ
ತಿಳಿಸುವೆನು ಕೇಳಿ ಏನೆಂದಿತು ಅಗ್ನಿಪುರಾಣ
ಎನ್ನುತಿಂತೆಂದರು ಬನ್ನಂಜೆಯ ಆಚಾರ್ಯ ಜಾಣ.
ಪುಷ್ಪಗಳವು ಸಿಕ್ಕಲಾರವು ಬೆಲೆಗೆ ಮಾರುಕಟ್ಟೆಯಲ್ಲಿ
ಬೆಳಸಬೇಕವನು ನಿಮ್ಮ ಹೃದಯತೋಟದಲ್ಲಿ
ಬೇಕಿಲ್ಲ ಅವಕೇನು ನೀರು ಗೊಬ್ಬರ ಬೀಜ
ಸಾಕಿಷ್ಟು ಶ್ರದ್ಧೆ, ಭಕುತಿ,ತಿಳುವಳಿಕೆ ಸಹಜ
ಅರಳಲಿ ಮೊದಲ ಪುಷ್ಪ, ಹೆಸರು ‘ಅಹಿಂಸೆ’
ಯಾರ, ಮನಕೆ, ದೇಹಕೆ, ಬೇಡ ನಿನ್ನಿಂದ ಹಿಂಸೆ
‘ಇಂದ್ರಿಯ ನಿಗ್ರಹ’ ವಾಗಲಿ ನಿನ್ನ ಎರಡನೆಯ ಪುಷ್ಪ
ಕಳೆಯದರಿಂದ ಕೊಳೆ ಕಾಮ, ಕೋಪ ತಾಪ
ಮೂರನೆಯ ಪುಷ್ಪ ‘ದಯೆ’ ಅದುವೆ ಧರ್ಮದ ಮೂಲ
ಇರಲಿ ಸರ್ವಭೂತಗಳಿಗಾಗಿ, ಲೋಪವಲ್ಲವದು, ಬಲ
ನಾಲ್ಕನೆಯ ಪುಷ್ಪವದಾಗಬೇಕು ‘ಕ್ಷಮೆ’
ಬೇಡ ಅಪಕಾರಿಗೆ ಪ್ರತೀಕಾರದ ಭ್ರಮೆ
ಐದನೆಯ ಪುಷ್ಪ ‘ಜ್ಞಾನ’, ಆಗು ನೀ ಪಿಪಾಸು
ಅದ ಸಾಧಿಸಲು ಬೆಳೆಸು ಆರನೆಯ ಪುಷ್ಪ ‘ತಪಸ್ಸು’
‘ಧ್ಯಾನ’ ದ ಸುಗ್ಗಿಯಾಗಲಿ ಈ ಪರಿಪಕ್ವ ಮನದೊಳಗೆ
‘ಸತ್ಯ’ ದ ಸೌರಭವಿರಲಿ ಈ ಏಳು ಪುಷ್ಪಗಳ ಜತೆಗೆ
ಹೃದಯೋದ್ಯಾನದ ಅಷ್ಟ ಕುಸುಮ ಸಮರ್ಪಣೆಯಿಂದ
ಪರಮಾತ್ಮ ಸಂತೃಪ್ತ, ಕೇಳು ಸತ್ಯವಾಕ್ಯ ಚಂದ !