Tuesday 24 March 2020

ಬೀಗ ಬಿದ್ದಿದ್ದ ಯುಗಾದಿ




ಮುಂಜಾನೆಯೆದ್ದು ಹೊರಬಂದಾಗ 

ದೇಶಕ್ಕೆ ಬೀಗ ಬಿದ್ದಿತ್ತು 
ಸುತ್ತಲೂ ಕತ್ತಲಿತ್ತು 
ಮನದಲ್ಲಿ ಅಂಜಿಕೆಯಿತ್ತು 

ಆದರೆ  

ತಂಗಾಳಿ  ಬೀಸುತ್ತಿತ್ತು 
ಕೋಗಿಲೆ  ಕೂಗುತ್ತಿತ್ತು 
ಗಿಡದಲ್ಲಿ ಹೂವು ಅರಳಿತ್ತು 

ಕೆಲಸಮಯದಲ್ಲೇ 
ಕಿರಣಮೂಡುವುದೆನ್ನಿಸಿ 
ಕಳವಳ ಕಡಿಮೆಯಾಯಿತು 

ಮರಳಿ ಮರಳಿ ಬರುವ ಯುಗಾದಿ 
ತಮಗೆಲ್ಲಾ  ಶುಭ ಕೊಂಡುಬರಲಿ 


ಸೂರ್ಯ



ಬೆಳಗ್ಗೆ ಉದಯಕಾಲದ ಸಮಯಕ್ಕೆ ನಮ್ಮ ಬಾಲ್ಕನಿಗೆ ಬಂದರೆ, ನಮ್ಮ ಎದುರಿನಲ್ಲಿ ಇರುವ ಮರಗಳ
ಮರೆಯಿಂದ ನಮಗೆ ಸೂರ್ಯೋದಯ ಕಾಣಬರುವುದು ಹೀಗೆ.  ಸೂರ್ಯ ಉದಯಿಸುತ್ತಾನೆ ಪ್ರತಿದಿನ.
ಭಾವನೆಗಳು ಉದಯಿಸಿ ಸಾಲುಗಳು ಮೂಡುತ್ತವೆ ಒಂದೊಂದುದಿನ ! 
ವೈರಸ್ ಕಾರ್ಮೋಡದ ಮಧ್ಯದಿಂದ ಸುದಿನಗಳ ಆಶೆಯ ರವಿಕಿರಣಗಳು ತೂರಿಬರಲೆಂದು ಆಶಿಸುತ್ತಾ
ಇಂದಿನ ಎರಡುಸಾಲುಗಳನ್ನು ತಮ್ಮ ಮುಂದಿಟ್ಟಿದ್ದೇನೆ. 








ಅದೇ ದಿಕ್ಕು 
ಅದೇ ಜಾಗ 
ಅದೇ ಸಮಯ 
ಆಕಾರ, ಬಣ್ಣ. 


ಕಾಣುತ್ತೇನೆ ದಿನದಿನ 
ಇವನು ಹುಟ್ಟುವುದನ್ನ. 


ಆದರಿಲ್ಲಿ ನೋಡಿ,
ಇವನ 
ಹೆಚ್ಚುಗಾರಿಕೆಯನ್ನ,


ಶತ ಶತಮಾನ 
ಸಾವಿರಾರು ಜನ 
ಬರೆದು ಬರೆದು 
ಸುರಿದರೂ 
ತೀರದು ಇವನ 

ಗುಣಗಾನ ! 



Monday 16 March 2020

ಕಂಪು ಸೂಸಿ ಕುಳಿತುದೇಕೆ ?


ಬೆಂಗಳೂರಿನ ಜಯನಗರದ ಮಾರುಕಟ್ಟೆಯಲ್ಲಿ ಸಂಜೆಯ ಸಮಯ ಮಾರಾಟಕಿಟ್ಟಿದ್ದ
ಹೂಗಳ ಮನೋಹರವಾದ ನೋಟ ಮನಸ್ಸಿಗೆ ಬಹಳ ಮುದವೆನ್ನಿಸಿತು.
ಆಗ ಮನದಲ್ಲಿ ಮೂಡಿದ ಕೆಲವು ಸಾಲುಗಳು ಒಂದುವಾರದ ತಿಣುಕಾಟದ
ನಂತರ ಒಂದು ರೂಪ ಪಡೆದಿವೆ. 






ಮೊಗ್ಗು ಬಿರಿದ ಮಲ್ಲಿಗೆ
ಸಂಪಿಗೆ ಶೇವಂತಿಗೆ
ಕನಕಾಂಬರ ಕೆಂಗುಲಾಬಿ    
ಕಂಗೊಳಿಸುವ ಮಾಲೆಯಾಗಿ 
ಸೊಂಪಾಗಿ ಸೊಗಯಿಸುತ್ತ  
ಕಂಪು ಸೂಸಿ ಕುಳಿತುದೇಕೆ ?


ಹರಿಯ ಕೊರಳ ಸುತ್ತ ಸುಳಿದು
ಒಲುಮೆಯಿಂದ  ಪಾದಕಿಳಿದು 
ನಲುಮೆಯಿಂದ ನಮಿಸಬೇಕೇ ? 


ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...