ಅವನ ಚಿತ್ತ !
ರವಿ, ಶಶಿಯರ
ಸೃಷ್ಟಿಸಿದಾತ
ಉದಯಾಸ್ತಗಳ
ನೇಮಿಸಿದಾತ
ನಮಗೆ ಕಂಗಳನಿತ್ತ
ನೋಡಿ ನಲಿದಾಡುವ
ಮನವನಿತ್ತ.
ಎಳೆ ಬಿಸಿಲಿನಲಿ
ಹಿತಗೊಳುವ
ತಂಗಾಳಿಯಲಿ
ಸುಖಪಡುವ
ಮೊದಲಹನಿ ಬಿದ್ದ
ಮಣ್ಣಿನಿಂದೆದ್ದ
ಮೆಲುವಾಸನೆಯ
ಮೂಸಿನಲಿವ
ಇಂದ್ರಿಯಗಳನಿತ್ತ
ಅವನ ಚಿತ್ತ !
ಸುಡುವ ಬಿಸಿಲನಿತ್ತ
ಹಸಿವ ಬರಗಾಲವನಿತ್ತ
ಸುರಿವ ಮಳೆಯಿತ್ತ
ಸೆಳೆವ ಪ್ರವಾಹವನಿತ್ತ
ಕಷ್ಟ ಕಾರ್ಪಣ್ಯವಿತ್ತ
ರೋಗ ರುಜಿನವನಿತ್ತ
ನೆಮ್ಮದಿಯ ಕಿತ್ತ
ಅವನ ಚಿತ್ತ !
ಬಂದ ಧರೆಯತ್ತ
ಧನುವ ಧರೆಗಿಟ್ಟವನತ್ತ
ಸಖನ ಶಿರ ನೇವರಿಸುತ್ತ
ಉಪದೇಶವ ನಮಗಿತ್ತ
ನೋಡುವಿಯೇಕೆ ಅತ್ತಿತ್ತ
ಎಲ್ಲವೂ ನನ ಚಿತ್ತ
ನಡೆ ನಾ ನಡೆಸಿದತ್ತ
ಸುಖದುಃಖದಲಿರಿಸಿ
ಸಮಚಿತ್ತ.
ಇಂದು ಮುಂಜಾನೆಯ ಮಳೆ
ಆಕಾಶಕ್ಕೆಲ್ಲಾ ಮೋಡಾಮುಚ್ಚಿ
ಚಂದ್ರನ್ ಮೋರೆ ಮರೇ ಮಾಚಿ
ಕತ್ಲಾಗ್ ಕುಂತ್ಕೊಂಡ್ ಈ ನಮ್ ದೇವ್ರು
ತಟ್ಟಾ ತಟ್ಟಾ ಮಳೆ ಬುಡ್ತೌನೆ
ಮುನಿಯ ಯೆಂಡ ಬುಡುವಂಗೇನೆ !
(ಶ್ರೀ ರಾಜರತ್ನಂ ಅವರ ಕ್ಷಮೆಕೋರಿ)
ರಘುನಂದನ