Tuesday, 5 February 2019

ಕಲಿಯುಗಕೆ ಸಿಲುಕಿಹ ಭಜರಂಗಬಲಿ

ಅಂಜನಿಯ ಸುತ ಆಂಜನೇಯ,
ಪಿಡಿದು ವಜ್ರಾಯುಧದಿ ಬಡಿದರೂ
ದವಡೆಮಾತ್ರ ಬಲಿಕೊಟ್ಟು,
ಹನೂಮಂತನಾಗುಳಿದೆ


ತ್ರೇತೆಯಲ್ಲಿ  ರಾಮಭಂಟ
ಸಾಗರವ ದಾಟಲೆರಗಿ
ಸುರಸೆ ನುಂಗಬಯಸಿದಾಗ
ಸರಸದಿಂದ  ಬಾಯಹೊಕ್ಕು
ವಿರಸವಿಲ್ಲದೆ ಹೊರಬಂದೆ !


ದ್ವಾಪರದಿ ದುರ್ಯೋಧನ
ಬೆಂಕಿಯಿಟ್ಟರೂ ಬದುಕುಳಿದು
ಗದೆಯೆದುರಿಸಿ,ಸದೆಬಡಿದು
ಬಲಭೀಮನೆನಿಸಿಕೊಂಡೆ


ಭಜರಂಗಬಲಿ ಎನಿಸಿ  
ಕಲಿಗಾಲದಿ ನಲಿದವನು
‘ದಲಿತ’ ನಾದ ಮರುಕ್ಷಣವೇ
‘ಆಲಿ’ ಯಾಗಿ ಹೋದೆಯಲ್ಲಾ !

ಕಲಿಯುಗದ ಕಲಿಗಳಿಗೆ   
ಸಿಲುಕಿಹೆ ಹನುಮಾ,
ಬಲಿಯಾಗುವೆ ಹುಲುಮನುಜರಿಗೆ !
ಕಾಲಪಿಡಿದ ಎನ್ನ
ಕಾಳಜಿಬಿಟ್ಟು, ನಿನ್ನ
ಬಾಲಉಳಿಸಿಕೊಳೋ ಜೀವೋತ್ತಮಾ !




No comments:

Post a Comment

  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...