Saturday 13 August 2022

ಬಾಯಲಿ ಹರಿನಾಮ, ಹೃದಯದಿ ಶ್ರೀರಾಮ .....


ಮಂತ್ರಾಲಯ ಪ್ರಭುಗಳು, ರಾಘವೇಂದ್ರಸ್ವಾಮಿಗಳು, ಗುರುರಾಯರು, ಅಥವಾ ಬರಿದೇ

‘ರಾಯ’ರೆಂದರೂ ‘ಓ’ಗೊಡುವ ಶ್ರೀ ರಾಘವೇಂದ್ರ ತೀರ್ಥರನ್ನುದ್ದೇಶಿಸಿ ನಾನು ಬರೆದ ಒಂದು

ಗೀತೆ ಇದು. ಲೋಕಾರೂಢಿಯಲ್ಲಿ, ‘ನಾನು ಬರೆದೆ’ ಎಂದರೆ, ಕೇಳಿದವರು  ಒಪ್ಪಿಯಾರು.

ಆದರೆ ರಾಯರು ಇದನ್ನು ಸರ್ವಥಾ ಒಪ್ಪಲಾರರು. ಅವರು ಒಪ್ಪಬೇಕಾದರೆ ಮೇಲಿನ

ವಾಕ್ಯವನ್ನು “ದೇಶಕಾಲಾಧಿಪತಿ, ದೇಹೇಂದ್ರಿಯಾಧಿಪತಿ ಶ್ರೀ ರಾಮಚಂದ್ರ ದೇವರ

ಪ್ರೇರಣೆ ಹಾಗೂ ಆಜ್ಞೆ ಯಂತೆ ಶ್ರೀ ಮುಖ್ಯಪ್ರಾಣದೇವರು ಕೃಪೆಮಾಡಿ ನನ್ನೊಳಗಿದ್ದು

ನನ್ನಿಂದ ಬರೆಸಿದ ಗೀತೆ” ಎಂದೇ ಬರೆಯಬೇಕು !  ಆದ್ದರಿಂದ, ಪ್ರಾಣದೇವರು ನನ್ನಿಂದ ಬರೆಸಿ,

ಹಾಡಿಸಿದ ಗೀತೆ ಇದು. ರಾಯರ ಆರಾಧನೆಯ ಸಂಧರ್ಭದಲ್ಲಿ, ಶ್ರೀ ರಾಘವೇಂದ್ರ

ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ

ಸ್ವಾಮಿಯ ಪ್ರೀತ್ಯರ್ಥವಾಗಿ. 


ಬಾಯಲಿ ಹರಿನಾಮ ಹೃದಯದಿ ಶ್ರೀರಾಮ 

ಶಿರದಲಿ ಪೂರ್ಣಬೋಧ ವಿಚಾರಧಾಮ   


ಕರದಲಿ ದಂಡ ಕಮಂಡಲ ಮಾಲ 

ಕರಕಮಲಾರ್ಚಿತ ಕೌಸಲ್ಯಾ ಬಾಲ 

ಕರುಣೆಯ ಸೂಸುವ ಕೃಪಾಕಟಾಕ್ಷ 

ಕರಜೋಡಿಸೆ ಗುರು ಕಲ್ಪವೃಕ್ಷ 


ಸತ್ಯ ಧರ್ಮ ಸಚ್ಚಾರಿತ್ರ್ಯ ನೇಮ

ಸಂತತ ಜಪಿಸುತ ಶ್ರೀರಾಮನಾಮ 

ಸಚ್ಚಾಸ್ತ್ರ ಸಂಗೀತ ಕಲೆಯಲ್ಲಿ ಪ್ರೇಮ 

ಸದ್ಭಕ್ತರ ಸಂತತ ಪಾಲಿಪ ನಾಮ


ಭವ್ಯಾಕೃತಿ, ರಕ್ತಾಂಬರ ಧಾರಿ 

ಭಕ್ತರಿಗೆ ತೋರಿ ಹರಿಯತ್ತ ದಾರಿ 

ಭಕ್ತಿಭಾವ ನಿಂತಂತೆ ಮೈತಳೆದು 

ಭವಲೋಕವ ದಾಟಿಸೋ ಕೈಪಿಡಿದು 


ಅನುದಿನ ನೆರೆವುದು ಭಕ್ತ ಸಮೂಹ 

ಆರದು ನಿನ್ನಯ ಸೇವೆಯ ದಾಹ  

ತುಂಗಾತಟ ಮಂತ್ರಾಲಯವಾಸ 

ನಿನ್ನ ಚರಣ, ಎನ್ನ ಶಿರಕೆ ಆವಾಸ 





No comments:

Post a Comment

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...