Sunday, 28 August 2022

ಮಳೆಯ ಮುಂಜಾನೆ and ಗೌರಿ ಹಬ್ಬ




ಐದಕ್ಕೆ ನಿದ್ದೆ ಹರಿಯಿತು, ಎದ್ದೆ 

ಹೊರಗೆ ನೆಲ, ಗಿಡ, ಗೋಡೆ ಎಲ್ಲ ಒದ್ದೆ 


ಮಳೆ ನಿಂತಿತೋ, ಇಲ್ಲವೋ ಜಿಜ್ಞಾಸೆ 

ಛತ್ರಿ ಹಿಡಿದು ಹೋಗಬಹುದೇನೋ? ಆಸೆ 


ಫ್ಲೈ ಓವರ್ ನ ಬದಿಗೆ ದೋಸೆಮಾರುವವ 

ದೋಸೆಮಾರಿದ ಫ್ಲೈ ಓವರ್ ನ ಕೆಳಗೆ ನಿಂದು

ದೋಸೆ ತಿನ್ನುವವರು, ಅವರ ಸ್ಕೂಟರು ಕಾರುಗಳು ತುಂಬಿ 

ನನ್ನ ರಸ್ತೆಯಾಯಿತು ಬಂದು !  


ಪಾರ್ಕಿನಲ್ಲಿ ದೀಪಗಳಿಗೆ ರಜೆ 

ಕತ್ತಲಲ್ಲಿ ಜಾರಿಬಿದ್ದರೆ ತಿಂಗಳ ಕಾಲ ಸಜೆ 


ನೀರಿನ ಭಾರಕ್ಕೆ ವಾಲಿದ ಕೊಂಬೆಗಳಡಿ 

ನಿಧಾನಕ್ಕೆ ನಡೆದೆ 

ಶಿವ ಲಿಂಗದ ಮೇಲೆ ತೊಟ್ಟು ತೊಟ್ಟೆಂದು ಬೀಳುವ 

ಅಭೀಶೇಕದ ಅನುಭವ ಪಡೆದೆ 

 

ಕೊಂಚಹೊತ್ತಿಗೆ ಬೆಳಕಾದಾಗ ಪಶ್ಚಿಮದಿಗಂತದಲ್ಲಿ 

ಗುಂಪು ಗುಂಪು ಬಿಳಿ ಮೋಡಸಾಲು 

ಸಮುದ್ರತೀರದಲ್ಲಿ ಒಂದರಮೇಲೊಂದು ಏರಿ ಬರುವ 

ಅಲೆಗಳದೇ ಚಾಲು 

ಕೆಲವೇ ಕ್ಷಣಗಳಲ್ಲಿ ಪೂರ್ವದಲ್ಲಿ ಸೂರ್ಯನ ಇಣುಕು 

ಸುತ್ತಲಿನ ಗಿಡ, ಮರ, ಗೋಡೆಗಳಮೇಲೆಲ್ಲಾ 

ಬಂಗಾರದ ಬೆಳಕು !





ಗೌರಿ ಹಬ್ಬ 




ನಮ್ಮ ಓದುವ ಮೇಜನ್ನು 

ತಲೆಕೆಳಗು ಮಾಡಿದರೆ 

ಅದರ ನಾಲ್ಕು ಕಾಲಾಯಿತು 

ನಾಲ್ಕು ಕಂಭ 


ಮುಂದಿನ ಎರಡು ಕಾಲಿಗೆ 

ಕಟ್ಟಿದೆವು 

ಬಾಳೆ ಕಂಭ 


ಮೇಲೆ ತೋರಣ ಕಟ್ಟಿ 

ಮಧ್ಯದಲ್ಲಿ ಕುಳ್ಳಿರಿಸಿದೆವು 

ಸ್ವರ್ಣ ಗೌರಿಯ ಬಿಂಬ 


ಅರಿಸಿನ ಕುಂಕುಮ 

ಹೊಳೆವ ವರ್ತಿ ವಸ್ತ್ರ,

ಮಲ್ಲಿಗೆ, ಸೇವಂತಿಗೆ, 

ಮುಂದೆ ತಟ್ಟೆ ತುಂಬ. 


ಕೆಂಪು ಹಸಿರು ಬಳೆಗಳು 

ರೇಷ್ಮೆ ಸೀರೆಯುಟ್ಟು 

ಪೂಜೆಗೆ ಕುಳಿತ 

ಅಮ್ಮನ ಕೈತುಂಬ 


ಪೂಜೆ ಮುಗಿದಂತೆ 

ಒರಳು, ಒನಕೆ 

ಕಾವಲಿ, ಡಬರಿ 

ಸೌಟು ಸಟ್ಟುಗದ ಸದ್ದು 

ಅಡಿಗೆಯ ಮನೆತುಂಬ 


ಘಮ್ಮನೆ ಬೇಯುವ 

ಹೋಳಿಗೆಯ ಸುವಾಸನೆ 

ನಮ್ಮ ಮೂಗಿನ ತುಂಬ 


ಅಡಿಗೆ ಯಾದೊಡನೆ 

ನೈವೇದ್ಯ ತೋರಿಸಿ 

ಉಂಡರೆ ಹೊಟ್ಟೆ ತುಂಬಾ 


ಎಲ್ಲಿ ಕುಳಿತರಲ್ಲೇ 

ತೂಕಡಿಸಿ ಜೊಂಪು 

ಕಣ್ಣ ತುಂಬ


ನಮ್ಮ ಚಿಕ್ಕಂದಿನ 

ಭಾದ್ರಪದ ತದಿಗೆಯ 

ಚಿತ್ರ, ಮುದ,

ಈಗಲೂ ಮನದ ತುಂಬ!

Saturday, 13 August 2022

ಬಾಯಲಿ ಹರಿನಾಮ, ಹೃದಯದಿ ಶ್ರೀರಾಮ .....


ಮಂತ್ರಾಲಯ ಪ್ರಭುಗಳು, ರಾಘವೇಂದ್ರಸ್ವಾಮಿಗಳು, ಗುರುರಾಯರು, ಅಥವಾ ಬರಿದೇ

‘ರಾಯ’ರೆಂದರೂ ‘ಓ’ಗೊಡುವ ಶ್ರೀ ರಾಘವೇಂದ್ರ ತೀರ್ಥರನ್ನುದ್ದೇಶಿಸಿ ನಾನು ಬರೆದ ಒಂದು

ಗೀತೆ ಇದು. ಲೋಕಾರೂಢಿಯಲ್ಲಿ, ‘ನಾನು ಬರೆದೆ’ ಎಂದರೆ, ಕೇಳಿದವರು  ಒಪ್ಪಿಯಾರು.

ಆದರೆ ರಾಯರು ಇದನ್ನು ಸರ್ವಥಾ ಒಪ್ಪಲಾರರು. ಅವರು ಒಪ್ಪಬೇಕಾದರೆ ಮೇಲಿನ

ವಾಕ್ಯವನ್ನು “ದೇಶಕಾಲಾಧಿಪತಿ, ದೇಹೇಂದ್ರಿಯಾಧಿಪತಿ ಶ್ರೀ ರಾಮಚಂದ್ರ ದೇವರ

ಪ್ರೇರಣೆ ಹಾಗೂ ಆಜ್ಞೆ ಯಂತೆ ಶ್ರೀ ಮುಖ್ಯಪ್ರಾಣದೇವರು ಕೃಪೆಮಾಡಿ ನನ್ನೊಳಗಿದ್ದು

ನನ್ನಿಂದ ಬರೆಸಿದ ಗೀತೆ” ಎಂದೇ ಬರೆಯಬೇಕು !  ಆದ್ದರಿಂದ, ಪ್ರಾಣದೇವರು ನನ್ನಿಂದ ಬರೆಸಿ,

ಹಾಡಿಸಿದ ಗೀತೆ ಇದು. ರಾಯರ ಆರಾಧನೆಯ ಸಂಧರ್ಭದಲ್ಲಿ, ಶ್ರೀ ರಾಘವೇಂದ್ರ

ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ

ಸ್ವಾಮಿಯ ಪ್ರೀತ್ಯರ್ಥವಾಗಿ. 


ಬಾಯಲಿ ಹರಿನಾಮ ಹೃದಯದಿ ಶ್ರೀರಾಮ 

ಶಿರದಲಿ ಪೂರ್ಣಬೋಧ ವಿಚಾರಧಾಮ   


ಕರದಲಿ ದಂಡ ಕಮಂಡಲ ಮಾಲ 

ಕರಕಮಲಾರ್ಚಿತ ಕೌಸಲ್ಯಾ ಬಾಲ 

ಕರುಣೆಯ ಸೂಸುವ ಕೃಪಾಕಟಾಕ್ಷ 

ಕರಜೋಡಿಸೆ ಗುರು ಕಲ್ಪವೃಕ್ಷ 


ಸತ್ಯ ಧರ್ಮ ಸಚ್ಚಾರಿತ್ರ್ಯ ನೇಮ

ಸಂತತ ಜಪಿಸುತ ಶ್ರೀರಾಮನಾಮ 

ಸಚ್ಚಾಸ್ತ್ರ ಸಂಗೀತ ಕಲೆಯಲ್ಲಿ ಪ್ರೇಮ 

ಸದ್ಭಕ್ತರ ಸಂತತ ಪಾಲಿಪ ನಾಮ


ಭವ್ಯಾಕೃತಿ, ರಕ್ತಾಂಬರ ಧಾರಿ 

ಭಕ್ತರಿಗೆ ತೋರಿ ಹರಿಯತ್ತ ದಾರಿ 

ಭಕ್ತಿಭಾವ ನಿಂತಂತೆ ಮೈತಳೆದು 

ಭವಲೋಕವ ದಾಟಿಸೋ ಕೈಪಿಡಿದು 


ಅನುದಿನ ನೆರೆವುದು ಭಕ್ತ ಸಮೂಹ 

ಆರದು ನಿನ್ನಯ ಸೇವೆಯ ದಾಹ  

ತುಂಗಾತಟ ಮಂತ್ರಾಲಯವಾಸ 

ನಿನ್ನ ಚರಣ, ಎನ್ನ ಶಿರಕೆ ಆವಾಸ 





Wednesday, 20 July 2022

ನನ್ನ ಗಾಯನ, ಮಂಗಟ್ಟೆಯ ಗಾಯನ !



ಶಾಲೆಯಲ್ಲಿ 

ವಾರ್ಷಿಕೋತ್ಸವಕ್ಕೆ 

ಪದ್ಯ ಹೇಳಲಿಕ್ಕೆ  

ನಡೆದಿತ್ತು ಆಯ್ಕೆ. 

ನಾ ಹಾಡಿದೆ

ಗೋವಿನ ಹಾಡು  

“ಗೊಗ್ಗರು ದನಿಯಪ್ಪಾ, 

ಬೇಡ” ಎಂದರು 

ನಮ್ಮ ಟೀಚರು 


ಗೆಳೆಯರ ಬಳಗದಲ್ಲಿ 

ಸಿನಿಮಾ ವಿಷಯದಲ್ಲಿ  

ಮಾತು ಮಸೆದಿದ್ದಾಗ

ಬಿತ್ತು ಬಾಯಿಂದ  

ಸಿನಿಮಾ ಹಾಡು.   

“ನೀನೇನಂದರೂ ಗುರು, 

ಕೇಳುತೀನಿ, ಆದರೂ  

ಹಾಡಬೇಡ ಮಾತ್ರ, ದೇವರು!” 

ಚಡ್ಡಿ ದೋಸ್ತನೆಂದ 

ಕಡ್ಡಿ ಮುರಿದಂತೆ  

 

ಮುಂಜಾನೆ, 

ಕಾಫಿಗಾಗಿ ಕಾಯುತ್ತಿದ್ದೆ 

ಸಂದೇಶಗಳ ನೋಡುತ್ತಿದ್ದೆ  

ಯಾರೋ ಹಾಕಿದ್ದರು  

ಒಂದು ಭಕ್ತಿ ಗೀತೆ. 

ಅರಿವಿಲ್ಲದೆಯೇ 

ನನ್ನ ಬಾಯಿಂದ ಹೊರಬಿತ್ತು 

ದಾಸರದೊಂದು ಮುತ್ತು.   

“ಬೆಳಗ್ಗೆದ್ದು ಏನು ಗಲಾಟೆ,

ಸಾಕು ನಿಮ್ಮ ಸಂಗೀತ” 

ನನ್ನ ಅರ್ಧಾಂಗಿ,

ಸೂಚಿಸಿದಳು ಸೌಮ್ಯವಾಗಿ, 

ತನ್ನ ಇಂಗಿತ ! 


ಮನೆಯ ಸುತ್ತಮುತ್ತ 

ಮರ ಗಿಡಗಳಲ್ಲಿ 

ಅಡಗಿರುತ್ತವೆ 

ಕೋಗಿಲೆ,ಗೋಪಿಹಕ್ಕಿ, 

ಮಂಗಟ್ಟೆ, ಮೀಂಚುಳ್ಳಿ. 

ಅನುದಿನದ ಶ್ರವಣ 

ಕೋಗಿಲೆ, ಗೋಪಿಹಕ್ಕಿಯ 

ಸುಮಧುರ ಗಾನ.  

ಜತೆಗೇ, 

ಮಂಗಟ್ಟೆ, ಮೀಂಚುಳ್ಳಿಯ

ಕರ್ಕಶ ತಾನ 


ಕೇಳಿಗೊತ್ತೆ ನಿಮಗೆ 

ಮಂಗಟ್ಟೆಯ ಗಾನ ? 

ಮಂಗಟ್ಟೆ  ತೆರೆದರೆ ಬಾಯಿ, 

ಇತರ ಪಕ್ಷಿಗಳೆಲ್ಲಾ ಸ್ಥಾಯಿ !! 

ಮಂಗಟ್ಟೆಗೆ ಗೊತ್ತೇ 

ತನ್ನ ದನಿಯ ತನಿ?

ಕಂಡಿತು ನೇಸರನ ಬನಿ  

ಮಂಗಟ್ಟೆ ಎತ್ತಿತು ದನಿ !   


ನನ್ನ ಎದೆಯೊಳಗೆ 

ಹುದುಗಿ ಕುಳಿತಿಹ 

ಮಂಗಟ್ಟೆ 

ಒಮ್ಮೊಮ್ಮೆ ಎಚ್ಚತ್ತು 

ಬಿಚ್ಚುತ್ತದೆ ಗಂಟಲು. 

ಹಕ್ಕಿ ಸ್ವಭಾವ, 

ಬೆಚ್ಚಬೇಕಿಲ್ಲ.  

ಕಚ್ಚುವುದಿಲ್ಲ !! 

 


Tuesday, 12 July 2022

ಸಾಗಲಿ ಚಿತ್ತ ಹರಿಯತ್ತ !

 

ಮನುಷ್ಯ ಬುದ್ಧಿಗೆ ಅತೀತವಾದ, ದೇವರು ಅಥವಾ ಹಾಗೆ ಕರೆಸಿಕೊಳ್ಳುವ ಒಂದು ಶಕ್ತಿ, ಉಂಟೇ -

ಇಲ್ಲವೇ ಎಂಬುದು ಕಾಲಾನುಕಾಲದಿಂದ ವಿನಾಕಾರಣ ಚರ್ಚೆಗೊಳಗಾದ ಒಂದು ಪ್ರಶ್ನೆ. ನನಗೆ ತಿಳಿದ

ಮಟ್ಟಿಗೆ, ಅಂಥ ಶಕ್ತಿಯೊಂದು ಉಂಟೆಂದಾಗಲೀ ಇಲ್ಲವೆಂದಾಗಲೀ, ನಮ್ಮ ಬುದ್ಧಿಗೆ ನಿಲುಕುವಂಥ

ಪುರಾವೆಯ ಸಹಿತ ಸಮರ್ಥಿಸಿಕೊಳ್ಳುವುದು ಅಸಾಧ್ಯವಾದ ಕೆಲಸ. ಆದರೆ ನಾವು ಸುಮ್ಮನೆ

ಕೂಡುವವರಲ್ಲ. ಇದೆ - ಇಲ್ಲ ಎಂಬ ಎರಡೂ ಪಕ್ಷಗಳು ತಮ್ಮ ತಮ್ಮ ಸಮರ್ಥನೆಯ ವ್ಯರ್ಥ

ಪ್ರಯತ್ನ ಮುಂದುವರೆಸುತ್ತಲೇ ಇರುವವರು. 


ದೇವರಿಲ್ಲ ಎನ್ನುವವರ ಚಟುವಟಿಕೆ ಮೇಲೆ ತಿಳಿಸಿದ ಚರ್ಚೆಗಷ್ಟೇ ಸೀಮಿತವಾಯಿತು. ಅವರು ತಮ್ಮ

ಕಣ್ಣಿಗೆ ಕಾಣುವಷ್ಟನ್ನು ಮಾತ್ರ ನೋಡಿಕೊಂಡು, ತಮ್ಮ ಬುದ್ಧಿಗೆ ಸಿಕ್ಕಷ್ಟನ್ನು ತಿಳಿದುಕೊಂಡು ಕೂತರಾಯಿತು.

ದೇವರಿದ್ದಾನೆನ್ನುವವರ ಕೆಲಸ ಅಲ್ಲಿಗೆ ಮುಗಿಯಲಿಲ್ಲ. ಎಲ್ಲಿದ್ದಾನೆ ? ಹೇಗಿದ್ದಾನೆ ?

ಅವನಿಗೂ/ಅವಳಿಗೂ /ಅದಕ್ಕೂ ನಮಗೂ ಸಂಬಂಧವೇನು? ಆ ಶಕ್ತಿಯ ಶಕ್ತಿ ಎಷ್ಟು? ಅದನ್ನು ಉಪಾಸಿಸುವ,

ಒಲಿಸಿಕೊಳ್ಳುವ ಬಗೆ ಹೇಗೆ ? ಇತ್ಯಾದಿ ಇತ್ಯಾದಿ ಹತ್ತಾರು ಪ್ರಶ್ನೆಗಳಿಗೆ ಹತ್ತಾರು ತೆರನಾದ ಉತ್ತರಗಳು,

ವಿಶ್ಲೇಷಣೆಗಳು. 


ಆಯಿತು. ನಂಬಿಕೆ ಉಳ್ಳವರೆಲ್ಲರೂ ಆ ಬುದ್ಧಿಗೆ ನಿಲುಕದ ವಸ್ತುವನ್ನು ತಮ್ಮ ತಮ್ಮ ಬುದ್ಧಿ, ತಮ್ಮ ತಮ್ಮ

ಭ್ರಮೆಗಳಿಗೆ ತಕ್ಕಂತೆ ಅರಿತುಕೊಳ್ಳಲಿ, ನಂಬಿಕೊಳ್ಳಲಿ, ನಡೆದುಕೊಳ್ಳಲಿ ಎಂದು ಸುಮ್ಮನಿರುವಂತಿಲ್ಲ.

ನಮ್ಮ ತಿಳುವಳಿಕೆಯೇ ಸರಿ, ಮತ್ತೆಲ್ಲರೂ ತಪ್ಪು ಎಂಬ ಹಠ.  ಇರಲಿ, ಇದೆಲ್ಲಾ ಬಗೆ ಹರಿಯದ

ವಿಷಯಗಳು. 


ಇಲ್ಲಿ ಕೆಳಗೆ ಕಾಣಿಸಿರುವ, ನಾನು ಬರೆದ ಒಂದು ಪದ್ಯದ ಬಗ್ಗೆ ಕೊಂಚ ವಿವರಣೆ ಅಗತ್ಯ ಎನಿಸಿತು. ಅದಕ್ಕೆ

ಪೀಠಿಕೆಯಾಗಿ ಮೇಲಿರುವ ಬರಹ. ನಾನು ಜನ್ಮತಳೆದದ್ದು ಮಾಧ್ವ ಬ್ರಾಹ್ಮಣ ಸಂಸಾರದಲ್ಲಿ. ನನ್ನ ರೀತಿ, ನೀತಿ,

ಆಚರಣೆಗಳು ಮಾಧ್ವ ಸಂಪ್ರದಾಯವನ್ನು ಅನುಸರಿಸಿವೆ. ಆದರೆ ಮಾಧ್ವ ಸಿದ್ಧಾಂತದ ಬಗ್ಗೆ ನನಗೆ ಹೆಚ್ಚು

ತಿಳುವಳಿಕೆ ಇಲ್ಲ. ನನಗಿರುವ ಕೊಂಚ  ತಿಳುವಳಿಕೆಗೆ ಎಟುಕಿದಂತೆ -  ಒಂದು ಜೀವ, ಪರಮಾತ್ಮನ ಬಗ್ಗೆ

ಜ್ಞಾನ ಪಡೆಯಬೇಕಾದರೆ, ಆ ಜೀವಕ್ಕೆ ಇರಬೇಕಾದ ಪ್ರಜ್ಞೆ, ಜೀವದಿಂದ ಆಗಬೇಕಾದ ಸಾಧನೆ ಮತ್ತು ಅದಕ್ಕೆ

ಬೇಕಾದ ದೈವ ಸಹಾಯ ಇವುಗಳನ್ನು ಸೂಚಿಸುವ ಒಂದು ಪದ್ಯ ಇದು. ಮಧ್ವ ಸಿದ್ಧಾಂತದ ಅರಿವಿಲ್ಲದವರಿಗೆ

ಈ ಪದ್ಯದ ಭಾವ ಪೂರ್ತಿ ತಿಳಿಯದೇ ಇರಬಹುದು. ಅಡ್ಡಿಯಿಲ್ಲ. ತಿಳಿಯಬೇಕೆನ್ನುವವರು ಕೇಳಿದರೆ, ನನಗೆ

ತಿಳಿದದ್ದನ್ನು ತಿಳಿಸುತ್ತೇನೆ ! 


ಹರಿಯ ಅರಿವಾಗಲು ಬೇಕು ಸಿರಿಯ ನೆರವು

ಪೊರೆಯಬೇಕು ಗರುಡನ ಗರಿಯ ಹರಿವು

ಹರಿಯುತಿರಬೇಕು ಸದಾ ಹರಿಯತ್ತ ಚಿತ್ತ 

ಸಿರಿರಮಣ ನಿಗಮಕ್ಕೆ ನಿಲುಕದವನತ್ತ 


ಕರ್ಮ ಸಾಂಖ್ಯಗಳ ಮರ್ಮ ತಿಳಿಯಬೇಕು 

ಧರ್ಮ ಮಾರ್ಗದಿ ಕರ್ಮ ನಡೆಯಬೇಕು 

ನಿರ್ಮಮ ನಿಷ್ಕಾಮ ನೇಮವಿರಬೇಕು   

ದುರ್ಮತ ದುರ್ವಾದ ದೂರಸರಿಯಬೇಕು  


ಹರಿಯೆ ಸರ್ವೋತ್ತಮನೆಂದರಿಯಬೇಕು 

ಗುರುವರರಿಟ್ಟ ಮಾರ್ಗ ಗಮಿಸಬೇಕು  

ತಾರತಮ್ಯವ ತಿಳಿದು ಜ್ಞಾನಗಮ್ಯನ ಭಜಿಸಿ  

ಪಾರಮಾರ್ಥದ ಹಾದಿಯಲಿ ಸಾಗಬೇಕು 


ಗುಣ ಅಗಣಿತನ ಕಣಕಣದಿ ಕಾಣಬೇಕು 

ಗುಣಸತ್ವವದು ಎತ್ತರಕೆ ಏರಬೇಕು 

ಪ್ರಾಣದೇವನ ಪಾದ ಪಿಡಿಯಬೇಕು

ಗುಣಪರಿಪೂರ್ಣನೆಡೆಗೆ ಸಾಗಬೇಕು.    



Sunday, 12 June 2022

ಮುಂಗಾರು - ಬೀರು - ನಾರಾಯಣಾಯಸ್ವಾಹಾ





ಮುಂಗಾರಿನ ಮಳೆ ಹಿಡಿಯುತ್ತದೆ ಸೋನೆ 

ಒಮ್ಮೊಮ್ಮೆ ಬಡಿಯುತ್ತದೆ ಜಡಿದು 

ಸಾಕಾಗಿ ಜಿನುಗುತ್ತ ಮಲಗುತ್ತದೆ 

ಹಾಗೆಯೇ ಸುತ್ತಿ ಸುಳಿದು 



ಸೂರ್ಯನೂ ಮಲಗಿರುತ್ತಾನೆ 

ಒಮ್ಮೊಮ್ಮೆ ಕಣ್ತೆರೆದು 

ಕಿರಣಗಳನ್ನು ತೂರಿಸುತ್ತಾನೆ 

ಮೋಡಗಳ ಸಂದಿಯಿಂದ 



ಬೀದಿ ದೀಪಗಳಿಗೂ 

ಮುಂಗಾರಿನ ರಜೆ 

ಆಗೀಗ ಮಿಣ್ಣಗೆ ಮಿಣುಕುತ್ತವೆ 

ಮತ್ತೆ ತಣ್ಣಗೆ ಮಲಗುತ್ತವೆ 



ನನ್ನ ತಿರುಗಾಟದ ಹುಚ್ಚು ನನಗೆ 

ಸುರಿವ ಮಳೆಯಲ್ಲೂ 

ಕೊಡೆಹಿಡಿದು ನಡೆಯುತ್ತೇನೆ 

ಕತ್ತಲಲ್ಲಿ ಕೊಚ್ಚೆ ತುಳಿಯುತ್ತೇನೆ 



ನನ್ನ ಕತ್ತಲೆಯ ದಾರಿಯಲ್ಲುಂಟು 

ಪೆದ್ರುವಿನ ಗಡಂಗು 

ಗಡಂಗೆಂದರೆ ತಿಳಿಯಿತೇ?

ಬಾರು ರೆಸ್ಟಾರೆಂಟು 



ಅವನ ರೆಸ್ಟಾರೆಂಟಿಗೆ 

ಅಂಟಿಕೊಂಡಿರುವ 

ನಿತ್ಯದ ಗಿರಾಕಿಗಳುಂಟು 

ನಾಯ್ಕ, ಪರಬ, ಪಿಂಟು 



ಬಾರಿನ ನಂದಾದೀಪದ 

ಮಂದಬೆಳಕಿನಲ್ಲಿ 

ಕೂತು ಮೇಜಿನ ಮುಂದು 

ಗುಟುಕರಿಸುತ್ತಾರೆ ಗುಂಡು 



ಜತೆಗುಂಟು ಪೆದ್ರುವಿನ ಪತ್ನಿಯ 

ಹೆಸರಾಂತ ಕೈರುಚಿ 

ಹುರಿದ ಮೀನು, ಕರಿದ ಕೋಳಿ 

ಮತ್ತು ಪಕ್ಕದ ಪೊದೇರನ ಪೋಳಿ  



ಅದೇನು ನಿಶ್ಯಬ್ದ ತನ್ಮಯತೆ 

ಆನಂದ ಶಾಂತಿ 

ಕಾಣಸಿಗದು ನಿಮಗೆಲ್ಲೂ 

ಯಾವ ಧ್ಯಾನಮಂದಿರದಲ್ಲೂ !



ನನ್ನ ಮನಸ್ಸೆನ್ನುತ್ತದೆ 

ನೋಡುತ್ತ ನಿಲ್ಲಬೇಡ ಗುಗ್ಗು 

ಒಳಗೆ ನುಗ್ಗು 

ಹಾಕೊಂದು ಪೆಗ್ಗು !



ಆದರೆ ನೋಡಿ, ಈ ಸಂಸಾರದ 

ಕೋಟಲೆಯಿಂದ ಪಾರಾಗಿ 

ಭಗವಂತನೆಡೆಗೆ ಅಡಿಯಿಡುವುದು 

ಅದೆಷ್ಟು ಕಷ್ಟವೋ 



ಭಗವಂತನ ಕೋಟಲೆಯಿಂದ 

ಬಿಡಿಸಿಕೊಂಡು 

ಬಾರಿನೊಳಗೆ ನುಗ್ಗುವುದೂ 

ಅಷ್ಟೇ ಕಷ್ಟ 



ಹಾಗಾಗಿ ನಾನು 

ನಿರಾಸೆಯಿಂದ ನೋಡುತ್ತಲೇ 

ನಿಧಾನವಾಗಿ ಕಾಲೆಳೆಯುತ್ತೇನೆ 

ಕತ್ತಲೆಯಲ್ಲಿ ಮನೆಗೆ 



ಕಾಲ್ತೊಳೆದು ಕೂತು, ಮರೆತು ಬೀರು,

ಹೀರುತ್ತೇನೆ ಕೈಯಿಂದ ನೀರು 

ಕೇಶವಾಯಸ್ವಾಹಾ, ನಾರಾಯಣಾಯಸ್ವಾಹಾ, 

ಮಾಧವಾಯಸ್ವಾಹಾ ..... ....... 



(ಪೊದೇರ - ಪೋರ್ಚುಗೀಸಿನ ‘padeiro’ ಶಬ್ದ ರೂಪಾಂತರಗೊಂಡು ಗೋವೆಯ ಕೊಂಕಣಿಯಲ್ಲಿ 

‘ಪೊದೇರ’ ಆಗಿದೆ. ರೊಟ್ಟಿಮಾಡುವವ, ‘baker’ ಎಂದರ್ಥ.   ‘ಪೋಳಿ’ - ಕಚ್ಚಾ ಗೋಧಿಹಿಟ್ಟಿನಿಂದ

ತಯಾರಿಸಿದ ಗುಂಡನೆಯ, ದಪ್ಪವಾದ, ಮೆದುವಾದ ರೊಟ್ಟಿ.   ) 







Saturday, 2 April 2022

ಯುಗಾದಿಯ ಶುಭದಿನದಂದು ಕೊಂಚ ಚಿಂತನೆ ಮತ್ತು ಸ್ತುತಿ.  



ಏನೋ ಓದಿದಾಗಲೋ, ಕೇಳಿದಾಗಲೋ, ಅಥವಾ ಮತ್ಯಾವುದೋ ಚಿಂತನೆಯಸಮಯದಲ್ಲೋ

ನನ್ನ ಮನದಲ್ಲಿ ಮೂಡುವ ಕೆಲವು ವಿಷಯಗಳನ್ನು ಅಥವಾ ಭಾವನೆಗಳನ್ನು ಒಂದು

ಬರಹದರೂಪಕ್ಕೆ ತಂದಿರಿಸುವುದು 

ನನ್ನ ದೊಂದು ಹವ್ಯಾಸ.  ಅದು ಗದ್ಯರೂಪದಲ್ಲಿರಬಹುದು ಅಥವಾ ಪದ್ಯವಾಗಿರಬಹುದು.

ತಲೆಯಲ್ಲಿ ಸುಳಿದಾಡುವ ವಿಷಯಗಳಿಗೆ ರೂಪಕೊಟ್ಟು ಒಂದೆಡೆ ಬರೆದಿರಿಸಿದಾಗ  ಅದೇನೋ

ಸಮಾಧಾನ. ಈ ಬರಹಗಳನ್ನು ಮತ್ತೊಬ್ಬರು ಓದಿ ಮೆಚ್ಚಿದರೆ  ಮನದಲ್ಲಿ ಒಂದು ಸಾರ್ಥಕ

ಭಾವನೆ ಮೂಡುತ್ತದೆ. ಆ ಸಾರ್ಥಕ ಭಾವನೆಯ ಹಿಂದೆಯೇ ತಲೆಯೆತ್ತುವುದು ಅಹಂಭಾವ.

ನಾನು ಇಂಥ ಬರಹವನ್ನು ಬರೆಯಲು (ಕಾರ್ಯವನ್ನು ಮಾಡಲು) ಶಕ್ತನಾಗಿದ್ದೇನೆಂಬ ಅಹಂಭಾವ. 


ನಾನು ಬರೆದ ಬರಹ ನನ್ನೊಬ್ಬನದೇ ಪ್ರಯತ್ನವೇ ? ಅಲ್ಲ. ಅದರ ಹಿಂದೆ ನಾನು ಓದಿದ

ಅನೇಕ ಪುಸ್ತಕಗಳ ಪ್ರಭಾವವಿದೆ. ಮತ್ತೊಬ್ಬರಿಂದ ಕೇಳಿದ ಅನೇಕ ವಿಷಯಗಳ ಪ್ರಭಾವವಿದೆ.

ನನಗೆ ಓದು ಬರಹ ಕಲಿಸಿಕೊಟ್ಟ ಅಧ್ಯಾಪಕರ ಪ್ರಯತ್ನವಿದೆ. ನಿತ್ಯ ಜೀವನದಲ್ಲಿ ಕಾಣುವ,

ಕೇಳುವ, ಒಡನೆ ವ್ಯವಹರಿಸುವ ಅನೇಕರಿಂದ ಅಪ್ರಯತ್ನವಾಗಿ, ಪ್ರಾಸಂಗಿಕವಾಗಿ ತಿಳಿದುಕೊಂಡಿದ್ದು,

ಬರಹದಲ್ಲಿ ಅಳವಡಿಸಿಕೊಂಡಿರುವ ವಿಷಯಗಳಿವೆ, ತಂದೆ ತಾಯಿಯರಿತ್ತ  ಸಂಸ್ಕಾರದ ಪ್ರಭಾವವಿದೆ. 

ಸ್ನೇಹಿತರೊಡನೆ ನಡೆಸಿದ ಬಿರಟೆಯಿಲ್ಲದ ಹರಟೆಯ ಪ್ರಭಾವವಿದೆ. ಒಟ್ಟಿನಲ್ಲಿ, ನನ್ನ ಬುದ್ಧಿಗೆ ತಿಳಿಯುವ,

ತಿಳಿಯದ, ಅನೇಕ ಶಕ್ತಿಗಳು ನನ್ನ ಬರಹದ ಹಿಂದೆ ಇವೆ. ನನ್ನ ಇಂದ್ರಿಯಗಳಿಗೆ ಎಟುಕಿದೆಲ್ಲವನ್ನೂ 

ತಲೆಯಲ್ಲಿ ಮಂಥನಮಾಡಿ, ನನ್ನ ತಿಳುವಳಿಕೆಯನ್ನು ಅದಕ್ಕೆ ಸೇರಿಸಿ ಬರೆದ ಪ್ರಯತ್ನ, ಶಕ್ತಿ, ನನ್ನದೇ.

ಆದ್ದರಿಂದ ನಾನು ಬರೆದದ್ದು ನನ್ನ ಸ್ವಂತ ಪ್ರಯತ್ನ ಅಥವಾ ಶಕ್ತಿಯಿಂದಲೇ ಎಂದು ತಿಳಿದು ಗರ್ವ

ಪಡುವುದರಲ್ಲಿ ತಪ್ಪೇನೂ ಇಲ್ಲ.  ಆದರೆ ಅಂಥ ತಿಳುವಳಿಕೆ, ‘ಅಹಂಭಾವ’ ಎನಿಸಿಕೊಳ್ಳುತ್ತದೆ.

ಮಾನವ ಸ್ವಭಾವದಲ್ಲಿರುವ ತ್ರಿಗುಣಗಳಲ್ಲಿ ಒಂದಾದ ‘ರಾಜಸಗುಣ’ ವಾಗುತ್ತದೆ. 


“ನನ್ನ ಬರಹ ನನ್ನ ಪ್ರಯತ್ನವಾದರೂ ಅದರ ಹಿಂದೆ ನನಗೆ ಕಾಣದ, ಅವಗಾಹನೆಗೆ ಬಾರದ,

ಅನೇಕ ಶಕ್ತಿಗಳ ಪ್ರಭಾವವಿದೆ. ಅದು ಪೂರ್ಣವಾಗಿ ನನ್ನದಲ್ಲ. ನಾನು ನನ್ನ ಬರಹಕ್ಕೆ ಸಹಾಯಮಾಡಿದ

ಆ ಶಕ್ತಿಗಳಿಗೆ ನಾನು ಋಣಿಯಾಗಿದ್ದೇನೆ” ಎಂಬ ದೈನ್ಯಪೂರ್ಣ ಭಾವನೆ ನನ್ನ ಗರ್ವವನ್ನು ಇಳಿಸುತ್ತದೆ.

ಅಹಂ ಅನ್ನು ಕಡಿಮೆಮಾಡುತ್ತದೆ. ಅದು ‘ಸಾತ್ವಿಕ ಗುಣ’.  


ಈ ರೀತಿ ನಮ್ಮ ಎಲ್ಲಾ ಕಾರ್ಯಗಳ ಹಿಂದೆ ಇದ್ದು, ನಮ್ಮ ಮೇಲೆ ಪ್ರಭಾವಬೀರಿ, ನಮ್ಮಿಂದ ಕ್ರಿಯೆಗಳನ್ನು

ಆಗಮಾಡಿಸುವ, ಮೇಲೆ ತಿಳಿಸಿರುವ, ಅನೇಕ ಶಕ್ತಿಗಳಲ್ಲಿ ಒಂದೊಂದನ್ನೂ ಒಂದೊಂದು ಹೂಗಳೆಂದು ಭಾವಿಸಿ,

ಅವೆಲ್ಲವುಗಳ ಒಟ್ಟು ರೂಪವನ್ನು  ಒಂದು ಪುಷ್ಪಮಾಲೆಯೆಂದು ಪರಿಗಣಿಸೋಣ.  ಆ ಮಾಲೆಯೊಳಗಣ

ಎಲ್ಲ  ಶಕ್ತಿಗಳಿಗೂ ಪ್ರೇರಕವಾಗಿದ್ದು, ಅವೆಲ್ಲವನ್ನೂ ಒಟ್ಟಿಗೆ ಸೇರಿಸಿ, ನಮ್ಮ - ಅವುಗಳ ಸಂಭಂದವನ್ನು ರೂಪಿಸಿ,

“ಮಾಲೆಯೊಳಗಿನ ದಾರದಂತೆ, ನಮಗೆ ಕಾಣದಂತೆ, ಸುಳಿದಾಡುತ್ತಿರುವ ಮಹಾ ಶಕ್ತಿಯನ್ನು ಭಗವಂತ

ಎನ್ನಬಹುದು” ಎಂದು ಪೂಜ್ಯ ಡಿ ವಿ ಜಿ ಯವರು “ಜೀವನ ಧರ್ಮ ಯೋಗ” ದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.  


ಆ ‘ಭಗವಂತ’ ನೆಂಬ ತಿಳುವಳಿಕೆ ಅನೇಕ ಬುದ್ಧಿ, ಸ್ವಭಾವ, ಅಭಿರುಚಿ ಗಳಿಗೆ ತಕ್ಕಂತೆ ಅನೇಕರೀತಿಗಳಲ್ಲಿ

ವ್ಯಕ್ತವಾಗಿ ನಮ್ಮ ಆಧ್ಯಾತ್ಮ ಚಿಂತನೆ, ಸಂಪ್ರದಾಯಗಳನ್ನು ರೂಪಿಸಿ, ಆಯಾ ಚಿಂತನೆಗಳಿಗೆ ತಕ್ಕ ದೇವರು,

ದೇವಸ್ಥಾನ, ಪೂಜೆ, ಆಚರಣೆಗಳಿಗೆ ಎಡೆಮಾಡಿ ಕೊಟ್ಟಿದೆ. 


ನಾನು ಹುಟ್ಟಿದ, ಬೆಳೆದ, ಕಂಡ, ಮತ್ತು ಅರಿತುಕೊಳ್ಳಲು ಪ್ರಯತ್ನಿಸುತ್ತಿರುವ ಮಾಧ್ವ ಬ್ರಾಹ್ಮಣ

ಸಂಪ್ರದಾಯದ ತಿಳುವಳಿಕೆ, ನಂಬಿಕೆಯಂತೆ, ನಾನು ಮಾಡುವ ಎಲ್ಲ ಕಾರ್ಯಗಳ ಪ್ರೇರಕ ಶಕ್ತಿ,

ಅಥವಾ ‘ಭಗವಂತ’ನನ್ನು  ಶ್ರೀ ಹರಿ - ನಾರಾಯಣ ಎನ್ನುತ್ತೇವೆ. ಅದನ್ನು ಮೀರಿದ ಶಕ್ತಿ ಮತ್ತೊಂದಿಲ್ಲ

ಎಂದು ನಂಬುತ್ತೇವೆ. “ಹರಿ ಸರ್ವೋತ್ತಮ”. ಅವನಿಗೆ ಅಧೀನವಾದ, ಸದಾ ಅವನಿಚ್ಛೆಯಂತೆ

ನಡೆಯುವ, ಅವನ ಚಿಂತನೆ, ಸೇವೆ, ಉಪಾಸನೆಗಳಲ್ಲಿ ನಿರಂತರ ತೊಡಗಿರುವ  ‘ಮುಖ್ಯಪ್ರಾಣ’

ಅಥವಾ ‘ವಾಯುದೇವರು’ ಎನಿಸಿಕೊಳ್ಳುವ ಮತ್ತೊಂದು ಶಕ್ತಿ ಇದ್ದು, ಅದು ಶ್ರೀಹರಿಯ

ಇಚ್ಛೆಗನುಗುಣವಾಗಿ ನನ್ನ ಬುದ್ಧಿಯನ್ನು ಪ್ರಚೋದಿಸಿ ನನ್ನಿಂದ ಸರ್ವ ಕಾರ್ಯಗಳನ್ನು ಮಾಡಿಸುತ್ತದೆ

ಮತ್ತು ಅದರ ಪ್ರಭಾವ ಪ್ರತಿಕ್ಷಣವೂ ನನ್ನೊಡನೆ ಇರುತ್ತದೆಂದು ನಂಬುತ್ತೇವೆ. 


ನನ್ನ ಸಮಸ್ತ ಸಾಧನೆಗಳು ಶ್ರೀಹರಿ - ಪ್ರಾಣದೇವರ, ಪ್ರೇರಣೆ, ಶಕ್ತಿಯ ಮೂಲಕವೇ

ಸಾಧ್ಯವಾಯಿತೆಂದು ಕೊಳ್ಳುವುದು ನನ್ನ ಅಹಂಭಾವವನ್ನು ಕಡಿತಗೊಳಿಸಿ, ಸಾತ್ವಿಕತೆಯನ್ನು

ಪ್ರಚೋದಿಸುತ್ತದೆ. ಸಾತ್ವಿಕತೆ ಹೆಚ್ಚಾದಷ್ಟು ವ್ಯಕ್ತಿಗೆ, ಸಮಾಜಕ್ಕೆ ಒಳಿತೆಂಬುದು ಎಲ್ಲರಿಗೂ

ವೇದ್ಯವಾಗಿರುವ ವಿಷಯ. ಇಂಥ ನಮ್ಮ ಚಿಂತನೆಯ ಸಾರವನ್ನು ಶ್ರೀ ರಾಘವೇಂದ್ರ ತೀರ್ಥರು

ತಮ್ಮ “ಪ್ರಾತಃ ಸಂಕಲ್ಪ ಗದ್ಯ” ದಲ್ಲಿ ತಂದಿರಿಸಿದ್ದಾರೆ.  ಆ ಗದ್ಯದಿಂದ ಪ್ರೇರಿತವಾದ ಈ ಕೆಳಗಿನ

ಪದ್ಯ ಶುಭಕೃತ್ ನಾಮ ಸಂವತ್ಸರದ ಮೊದಲ ದಿನದಂದು ಹರಿ-ವಾಯುಗಳಿಗೆ, ಸಮರ್ಪಣೆ. 

ಶುಭಕೃತ್ ನಾಮ ಸಂವತ್ಸರವು  ತಮ್ಮೆಲ್ಲರಿಗೂ ಶುಭತರಲೆಂದು ಹಾರೈಕೆ. 



ಸಕಲ ಗುಣ ಪರಿಪೂರ್ಣ ರೂಪ 

ನಿನಗಿಲ್ಲ ದೋಷ, ಲೇಶ ಪಾಪ   

ಸರ್ವ ದೇಹಕಧಿಪತಿಯು ನೀನು 

ಸರ್ವ ದೇಶಕಧಿಪತಿಯು ನೀನು 


ಹಕ್ಕಿಯಿಂಚರ ನಿನ್ನ ನಾಮ  

ಸಿಂಹ ಘರ್ಜನೆ ನಿನ್ನ ನಾಮ  

ನಭದಿ ಗುಡುಗದು ನಿನ್ನ ನಾಮ  

ಶರಧಿ ಮೊರೆತವು ನಿನ್ನ ನಾಮ 


ಘಂಟೆಯಿನಿದನಿ ನಿನ್ನ ನಾಮ  

ಭೇರಿ ಮಾರ್ದನಿ ನಿನ್ನ ನಾಮ  

ಮಂತ್ರ ಘೋಷವು ನಿನ್ನ ನಾಮ  

ಸಾಮಗಾನವು  ನಿನ್ನ ನಾಮ 


ಎನ್ನ ಕಿವಿಗೆ ಬಿದ್ದೆಲ್ಲ ನಾದ 

ನಿನ್ನ ನಾಮವಾಗಿರೆ, ಶ್ರೀಪಾದ,

ನನಗಿನ್ನೇಕೆ ವೇದ, ವಾದ?

ರಘುನಂದನಗೆ ಸಾಕು, ನಿನ್ನ ಪಾದ. 




  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...