Monday, 26 September 2022

ದಸರಾ ಗೊಂಬೆ

ನಮ್ಮ ಚಿಕ್ಕಂದಿನಲ್ಲಿ ದಸರಾಹಬ್ಬಕ್ಕೆ ಶಾಲೆಗೆ ರಜೆ. ಅದಕ್ಕೆ ಮುಂಚೆ ಮುಂಚೆ ನಾವು ‘ಚಿಕ್ಕ ಪರೀಕ್ಷೆ’

ಎಂದು ಕರೆಯುತ್ತಿದ್ದ ಮಧ್ಯಕಾಲೀನ ಪರೀಕ್ಷೆ ಮುಗಿದಿರುತ್ತಿತ್ತು. ಹಾಗಾಗಿ ದಸರಾರಜೆಯಲ್ಲಿ ವಿದ್ಯಾಭ್ಯಾಸಕ್ಕೂ ರಜೆ. 


ದಸರಾ ಎಂದಕೂಡಲೇ ಹಬ್ಬಕ್ಕೆ ಬೊಂಬೆಗಳನ್ನು ಜೋಡಿಸುವ ಖುಷಿ ನಮಗೆ. ಮನೆಯಲ್ಲಿದ್ದ ಮೇಜು,

ಬೆಂಚು, ಟೀಪಾಯಿ ಎಲ್ಲವನ್ನೂ ಜೋಡಿಸಿ ಎರಡು - ಮೂರು  ಮೆಟ್ಟಲುಗಳನ್ನಾಗಿ ಮಾಡಿ,

ಅದರಮೇಲೊಂದು ವಸ್ತ್ರಹಾಸಿ, ಮಧ್ಯದಲ್ಲಿ ಪಟ್ಟದ ಗೊಂಬೆಗಳನ್ನಿಟ್ಟು ಅದರ ಸುತ್ತ ಮನೆಯಲ್ಲಿರುತ್ತಿದ್ದ

ಎಲ್ಲ ಗೊಂಬೆಗಳು ಮತ್ತು ಆಟದಸಾಮಾನುಗಳನ್ನು ಓರಣವಾಗಿ ಜೋಡಿಸಿಡುತ್ತಿದ್ದೆವು. ನಂತರ

ಸರಸ್ವತೀಪೂಜೆಯದಿವಸ ಸರಸ್ವತಿಯ ವಿಗ್ರಹ, ಆಯುಧಪೂಜೆಗೆ ಚಾಕು, ಕತ್ತರಿ, ಮಚ್ಚು, ಸ್ಕ್ರೂ ಡ್ರೈವರ್,

ಎಲ್ಲಕ್ಕೂ ಜಾಗಮಾಡಿ ಇಡುವ, ಪೂಜಿಸುವ, ಸಂಭ್ರಮವೇ ಸಂಭ್ರಮ.  ಹತ್ತುದಿನದ ಚಟುವಟಿಕೆಯ

ನಂತರ ಅದೆಲ್ಲವನ್ನೂ ತೆಗೆದು ಪೆಟ್ಟಿಗೆಗೆ ಸೇರಿಸಿ, ಶಾಲೆಯ ಚೀಲ ಹುಡುಕಿ, ಪುಸ್ತಕ ಜೋಡಿಸಿಕೊಂಡು,

ಜೋಲುಮುಖದಿಂದ ಮತ್ತೆ ಶಾಲೆಯಕಡೆ ನಡೆಯುವುದು.  


ನಾನು ಬೆಳೆದಂತೆ ಅನೇಕ ವರುಷಗಳ ಕಾಲ ಎಲ್ಲ ಮನೆಗಳಲ್ಲೂ ದಸರೆಯ ಸಂಭ್ರಮ ಬಹಳವೇ

ಇಳಿಮುಖವಾಗಿ ಹೋಗಿತ್ತು. ಗೊಂಬೆಗಳ ಪ್ರದರ್ಶನ ನಿಂತೇಹೋಗಿ, ಪೂಜೆಗೋಸ್ಕರ ಎರಡು ಪಟ್ಟದ

ಗೊಂಬೆಗಳು ಹಾಗೂ ಸರಸ್ವತಿಯ ವಿಗ್ರಹ ಮಾತ್ರ ಒಂದು ಮೇಜಿನಮೇಲೆ ಕಾಣುತ್ತಿದ್ದವು. 


ಈಗ ಕೆಲವು ವರುಷಗಳಿಂದ ಮತ್ತೆ ದಸರಾಗೊಂಬೆಗಳನ್ನು ಕೊಳ್ಳುವುದು, ವಿಧ ವಿಧವಾಗಿ ಅಲಂಕರಿಸಿ

ಜೋಡಿಸಿ ಪ್ರದರ್ಶನ ಮಾಡುವುದು ಮುಂತಾದ ಚಟುವಟಿಕೆಗಳು ಕಾಣಬರುತ್ತಿವೆ. ಈ ನಮ್ಮ

ಸಂಪ್ರದಾಯ ಮತ್ತೆ ಉತ್ತೇಜಿತವಾಗಿ ಮನೆಮನೆಗಳಲ್ಲೂ ಕಾಣುತ್ತಿರುವುದು ನನಗೆ ಬಹಳ ಸಂತೋಷದ

ವಿಷಯ. ಅದರೊಂದಿಗೆ  ದಸರಾ ಹತ್ತಿರಬಂದಂತೆ ಅಂಗಡಿಗಳಲ್ಲಿ, ರಸ್ತೆಪಕ್ಕಗಳಲ್ಲಿ, ಗೊಂಬೆಗಳ

ಮಾರಾಟದ ಬಿರುಸು ಸಹ ಕಾಣುತ್ತಿದೆ. ಮೊನ್ನೆ ಹಾಗೆಯೇ ಒಂದು ಅಂಗಡಿಯಲ್ಲಿ ಮಾರಾಟಕ್ಕಿದ್ದ

ಗೊಂಬೆಗಳನ್ನು ಕಂಡಾಗ ಮನದಲ್ಲಿ ಮೂಡಿತು ಕೆಳಗಿನ ಪದ್ಯ.  


ಗೊಂಬೆಯಂಗಡಿಯಲ್ಲಿ ಕಂಡಿತು 

ದಸರಾಗೊಂಬೆ ಪ್ರದರ್ಶನ

ನೆಲದಿಂದ ಸೂರಿನವರೆಗೆ 

ಗೊಂಬೆಗಳ ಸೋಪಾನ 


ರಾಮ ಆಂಜನೇಯರ 

ಪ್ರೀತಿಪೂರ್ವಕ ಆಲಿಂಗನ 

ನೋಡುವನು ಶೇಷತಲ್ಪದಲೊರಗಿ

ಅನಂತಶಯನ


ಪಕ್ಕದಲ್ಲೆ ಬಾಲ ಕೃಷ್ಣನ 

ಕಾಳಿಂಗ ಮರ್ದನ 

ಈ ಪಕ್ಕ ಭಾರ್ಯೆ ನಡೆಸಿಹಳು  

ಮಹಿಷಾಸುರ ಮರ್ದನ


ಮೇಲೆ ಶ್ವೇತಧಾರಿಣಿ 

ಸರಸತಿಯ ವೀಣಾವಾದನ

ಆಲಿಸುತ್ತ ಮೈಮರೆತಿಹನು  

ರಾಮಬಂಟ ಹನುಮಾನ


ಕೆಳಗೆ ಸಾಲಿನಲ್ಲಿ ನಡೆದಿದೆ 

ಭೂಸುರರ ಭೂರಿಭೋಜನ

ಅದಕೆ ವೀಕ್ಷಕ ನಮ್ಮ 

ಗಣಪ, ಮೂಷಿಕ ವಾಹನ


ಅತ್ತ ನೋಡಿದರೆ, ಅವನಪ್ಪ 

ಶಿವ, ಧ್ಯಾನಮಗ್ನ 

ಇತ್ತ ಕಮಲನೇತ್ರನ ನಾಭಿಯಲಿ 

ಶಿವನ ಅಪ್ಪನ ಜನನ ! 


ಕೊಳುವವರ ಕಿಸೆಯೆಡೆಗೆ 

ಮಾರುವವರ ಗಮನ 

ನಾಡಹಬ್ಬದ ಸಂಭ್ರಮ 

ನಾಡಿಗೆ ನಿತ್ಯನೂತನ !  


ತಮ್ಮೆಲ್ಲರಿಗೂ ನಾಡಹಬ್ಬದ ಶುಭಾಶಯಗಳು 


Sunday, 28 August 2022

ಮಳೆಯ ಮುಂಜಾನೆ and ಗೌರಿ ಹಬ್ಬ




ಐದಕ್ಕೆ ನಿದ್ದೆ ಹರಿಯಿತು, ಎದ್ದೆ 

ಹೊರಗೆ ನೆಲ, ಗಿಡ, ಗೋಡೆ ಎಲ್ಲ ಒದ್ದೆ 


ಮಳೆ ನಿಂತಿತೋ, ಇಲ್ಲವೋ ಜಿಜ್ಞಾಸೆ 

ಛತ್ರಿ ಹಿಡಿದು ಹೋಗಬಹುದೇನೋ? ಆಸೆ 


ಫ್ಲೈ ಓವರ್ ನ ಬದಿಗೆ ದೋಸೆಮಾರುವವ 

ದೋಸೆಮಾರಿದ ಫ್ಲೈ ಓವರ್ ನ ಕೆಳಗೆ ನಿಂದು

ದೋಸೆ ತಿನ್ನುವವರು, ಅವರ ಸ್ಕೂಟರು ಕಾರುಗಳು ತುಂಬಿ 

ನನ್ನ ರಸ್ತೆಯಾಯಿತು ಬಂದು !  


ಪಾರ್ಕಿನಲ್ಲಿ ದೀಪಗಳಿಗೆ ರಜೆ 

ಕತ್ತಲಲ್ಲಿ ಜಾರಿಬಿದ್ದರೆ ತಿಂಗಳ ಕಾಲ ಸಜೆ 


ನೀರಿನ ಭಾರಕ್ಕೆ ವಾಲಿದ ಕೊಂಬೆಗಳಡಿ 

ನಿಧಾನಕ್ಕೆ ನಡೆದೆ 

ಶಿವ ಲಿಂಗದ ಮೇಲೆ ತೊಟ್ಟು ತೊಟ್ಟೆಂದು ಬೀಳುವ 

ಅಭೀಶೇಕದ ಅನುಭವ ಪಡೆದೆ 

 

ಕೊಂಚಹೊತ್ತಿಗೆ ಬೆಳಕಾದಾಗ ಪಶ್ಚಿಮದಿಗಂತದಲ್ಲಿ 

ಗುಂಪು ಗುಂಪು ಬಿಳಿ ಮೋಡಸಾಲು 

ಸಮುದ್ರತೀರದಲ್ಲಿ ಒಂದರಮೇಲೊಂದು ಏರಿ ಬರುವ 

ಅಲೆಗಳದೇ ಚಾಲು 

ಕೆಲವೇ ಕ್ಷಣಗಳಲ್ಲಿ ಪೂರ್ವದಲ್ಲಿ ಸೂರ್ಯನ ಇಣುಕು 

ಸುತ್ತಲಿನ ಗಿಡ, ಮರ, ಗೋಡೆಗಳಮೇಲೆಲ್ಲಾ 

ಬಂಗಾರದ ಬೆಳಕು !





ಗೌರಿ ಹಬ್ಬ 




ನಮ್ಮ ಓದುವ ಮೇಜನ್ನು 

ತಲೆಕೆಳಗು ಮಾಡಿದರೆ 

ಅದರ ನಾಲ್ಕು ಕಾಲಾಯಿತು 

ನಾಲ್ಕು ಕಂಭ 


ಮುಂದಿನ ಎರಡು ಕಾಲಿಗೆ 

ಕಟ್ಟಿದೆವು 

ಬಾಳೆ ಕಂಭ 


ಮೇಲೆ ತೋರಣ ಕಟ್ಟಿ 

ಮಧ್ಯದಲ್ಲಿ ಕುಳ್ಳಿರಿಸಿದೆವು 

ಸ್ವರ್ಣ ಗೌರಿಯ ಬಿಂಬ 


ಅರಿಸಿನ ಕುಂಕುಮ 

ಹೊಳೆವ ವರ್ತಿ ವಸ್ತ್ರ,

ಮಲ್ಲಿಗೆ, ಸೇವಂತಿಗೆ, 

ಮುಂದೆ ತಟ್ಟೆ ತುಂಬ. 


ಕೆಂಪು ಹಸಿರು ಬಳೆಗಳು 

ರೇಷ್ಮೆ ಸೀರೆಯುಟ್ಟು 

ಪೂಜೆಗೆ ಕುಳಿತ 

ಅಮ್ಮನ ಕೈತುಂಬ 


ಪೂಜೆ ಮುಗಿದಂತೆ 

ಒರಳು, ಒನಕೆ 

ಕಾವಲಿ, ಡಬರಿ 

ಸೌಟು ಸಟ್ಟುಗದ ಸದ್ದು 

ಅಡಿಗೆಯ ಮನೆತುಂಬ 


ಘಮ್ಮನೆ ಬೇಯುವ 

ಹೋಳಿಗೆಯ ಸುವಾಸನೆ 

ನಮ್ಮ ಮೂಗಿನ ತುಂಬ 


ಅಡಿಗೆ ಯಾದೊಡನೆ 

ನೈವೇದ್ಯ ತೋರಿಸಿ 

ಉಂಡರೆ ಹೊಟ್ಟೆ ತುಂಬಾ 


ಎಲ್ಲಿ ಕುಳಿತರಲ್ಲೇ 

ತೂಕಡಿಸಿ ಜೊಂಪು 

ಕಣ್ಣ ತುಂಬ


ನಮ್ಮ ಚಿಕ್ಕಂದಿನ 

ಭಾದ್ರಪದ ತದಿಗೆಯ 

ಚಿತ್ರ, ಮುದ,

ಈಗಲೂ ಮನದ ತುಂಬ!

Saturday, 13 August 2022

ಬಾಯಲಿ ಹರಿನಾಮ, ಹೃದಯದಿ ಶ್ರೀರಾಮ .....


ಮಂತ್ರಾಲಯ ಪ್ರಭುಗಳು, ರಾಘವೇಂದ್ರಸ್ವಾಮಿಗಳು, ಗುರುರಾಯರು, ಅಥವಾ ಬರಿದೇ

‘ರಾಯ’ರೆಂದರೂ ‘ಓ’ಗೊಡುವ ಶ್ರೀ ರಾಘವೇಂದ್ರ ತೀರ್ಥರನ್ನುದ್ದೇಶಿಸಿ ನಾನು ಬರೆದ ಒಂದು

ಗೀತೆ ಇದು. ಲೋಕಾರೂಢಿಯಲ್ಲಿ, ‘ನಾನು ಬರೆದೆ’ ಎಂದರೆ, ಕೇಳಿದವರು  ಒಪ್ಪಿಯಾರು.

ಆದರೆ ರಾಯರು ಇದನ್ನು ಸರ್ವಥಾ ಒಪ್ಪಲಾರರು. ಅವರು ಒಪ್ಪಬೇಕಾದರೆ ಮೇಲಿನ

ವಾಕ್ಯವನ್ನು “ದೇಶಕಾಲಾಧಿಪತಿ, ದೇಹೇಂದ್ರಿಯಾಧಿಪತಿ ಶ್ರೀ ರಾಮಚಂದ್ರ ದೇವರ

ಪ್ರೇರಣೆ ಹಾಗೂ ಆಜ್ಞೆ ಯಂತೆ ಶ್ರೀ ಮುಖ್ಯಪ್ರಾಣದೇವರು ಕೃಪೆಮಾಡಿ ನನ್ನೊಳಗಿದ್ದು

ನನ್ನಿಂದ ಬರೆಸಿದ ಗೀತೆ” ಎಂದೇ ಬರೆಯಬೇಕು !  ಆದ್ದರಿಂದ, ಪ್ರಾಣದೇವರು ನನ್ನಿಂದ ಬರೆಸಿ,

ಹಾಡಿಸಿದ ಗೀತೆ ಇದು. ರಾಯರ ಆರಾಧನೆಯ ಸಂಧರ್ಭದಲ್ಲಿ, ಶ್ರೀ ರಾಘವೇಂದ್ರ

ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ

ಸ್ವಾಮಿಯ ಪ್ರೀತ್ಯರ್ಥವಾಗಿ. 


ಬಾಯಲಿ ಹರಿನಾಮ ಹೃದಯದಿ ಶ್ರೀರಾಮ 

ಶಿರದಲಿ ಪೂರ್ಣಬೋಧ ವಿಚಾರಧಾಮ   


ಕರದಲಿ ದಂಡ ಕಮಂಡಲ ಮಾಲ 

ಕರಕಮಲಾರ್ಚಿತ ಕೌಸಲ್ಯಾ ಬಾಲ 

ಕರುಣೆಯ ಸೂಸುವ ಕೃಪಾಕಟಾಕ್ಷ 

ಕರಜೋಡಿಸೆ ಗುರು ಕಲ್ಪವೃಕ್ಷ 


ಸತ್ಯ ಧರ್ಮ ಸಚ್ಚಾರಿತ್ರ್ಯ ನೇಮ

ಸಂತತ ಜಪಿಸುತ ಶ್ರೀರಾಮನಾಮ 

ಸಚ್ಚಾಸ್ತ್ರ ಸಂಗೀತ ಕಲೆಯಲ್ಲಿ ಪ್ರೇಮ 

ಸದ್ಭಕ್ತರ ಸಂತತ ಪಾಲಿಪ ನಾಮ


ಭವ್ಯಾಕೃತಿ, ರಕ್ತಾಂಬರ ಧಾರಿ 

ಭಕ್ತರಿಗೆ ತೋರಿ ಹರಿಯತ್ತ ದಾರಿ 

ಭಕ್ತಿಭಾವ ನಿಂತಂತೆ ಮೈತಳೆದು 

ಭವಲೋಕವ ದಾಟಿಸೋ ಕೈಪಿಡಿದು 


ಅನುದಿನ ನೆರೆವುದು ಭಕ್ತ ಸಮೂಹ 

ಆರದು ನಿನ್ನಯ ಸೇವೆಯ ದಾಹ  

ತುಂಗಾತಟ ಮಂತ್ರಾಲಯವಾಸ 

ನಿನ್ನ ಚರಣ, ಎನ್ನ ಶಿರಕೆ ಆವಾಸ 





Wednesday, 20 July 2022

ನನ್ನ ಗಾಯನ, ಮಂಗಟ್ಟೆಯ ಗಾಯನ !



ಶಾಲೆಯಲ್ಲಿ 

ವಾರ್ಷಿಕೋತ್ಸವಕ್ಕೆ 

ಪದ್ಯ ಹೇಳಲಿಕ್ಕೆ  

ನಡೆದಿತ್ತು ಆಯ್ಕೆ. 

ನಾ ಹಾಡಿದೆ

ಗೋವಿನ ಹಾಡು  

“ಗೊಗ್ಗರು ದನಿಯಪ್ಪಾ, 

ಬೇಡ” ಎಂದರು 

ನಮ್ಮ ಟೀಚರು 


ಗೆಳೆಯರ ಬಳಗದಲ್ಲಿ 

ಸಿನಿಮಾ ವಿಷಯದಲ್ಲಿ  

ಮಾತು ಮಸೆದಿದ್ದಾಗ

ಬಿತ್ತು ಬಾಯಿಂದ  

ಸಿನಿಮಾ ಹಾಡು.   

“ನೀನೇನಂದರೂ ಗುರು, 

ಕೇಳುತೀನಿ, ಆದರೂ  

ಹಾಡಬೇಡ ಮಾತ್ರ, ದೇವರು!” 

ಚಡ್ಡಿ ದೋಸ್ತನೆಂದ 

ಕಡ್ಡಿ ಮುರಿದಂತೆ  

 

ಮುಂಜಾನೆ, 

ಕಾಫಿಗಾಗಿ ಕಾಯುತ್ತಿದ್ದೆ 

ಸಂದೇಶಗಳ ನೋಡುತ್ತಿದ್ದೆ  

ಯಾರೋ ಹಾಕಿದ್ದರು  

ಒಂದು ಭಕ್ತಿ ಗೀತೆ. 

ಅರಿವಿಲ್ಲದೆಯೇ 

ನನ್ನ ಬಾಯಿಂದ ಹೊರಬಿತ್ತು 

ದಾಸರದೊಂದು ಮುತ್ತು.   

“ಬೆಳಗ್ಗೆದ್ದು ಏನು ಗಲಾಟೆ,

ಸಾಕು ನಿಮ್ಮ ಸಂಗೀತ” 

ನನ್ನ ಅರ್ಧಾಂಗಿ,

ಸೂಚಿಸಿದಳು ಸೌಮ್ಯವಾಗಿ, 

ತನ್ನ ಇಂಗಿತ ! 


ಮನೆಯ ಸುತ್ತಮುತ್ತ 

ಮರ ಗಿಡಗಳಲ್ಲಿ 

ಅಡಗಿರುತ್ತವೆ 

ಕೋಗಿಲೆ,ಗೋಪಿಹಕ್ಕಿ, 

ಮಂಗಟ್ಟೆ, ಮೀಂಚುಳ್ಳಿ. 

ಅನುದಿನದ ಶ್ರವಣ 

ಕೋಗಿಲೆ, ಗೋಪಿಹಕ್ಕಿಯ 

ಸುಮಧುರ ಗಾನ.  

ಜತೆಗೇ, 

ಮಂಗಟ್ಟೆ, ಮೀಂಚುಳ್ಳಿಯ

ಕರ್ಕಶ ತಾನ 


ಕೇಳಿಗೊತ್ತೆ ನಿಮಗೆ 

ಮಂಗಟ್ಟೆಯ ಗಾನ ? 

ಮಂಗಟ್ಟೆ  ತೆರೆದರೆ ಬಾಯಿ, 

ಇತರ ಪಕ್ಷಿಗಳೆಲ್ಲಾ ಸ್ಥಾಯಿ !! 

ಮಂಗಟ್ಟೆಗೆ ಗೊತ್ತೇ 

ತನ್ನ ದನಿಯ ತನಿ?

ಕಂಡಿತು ನೇಸರನ ಬನಿ  

ಮಂಗಟ್ಟೆ ಎತ್ತಿತು ದನಿ !   


ನನ್ನ ಎದೆಯೊಳಗೆ 

ಹುದುಗಿ ಕುಳಿತಿಹ 

ಮಂಗಟ್ಟೆ 

ಒಮ್ಮೊಮ್ಮೆ ಎಚ್ಚತ್ತು 

ಬಿಚ್ಚುತ್ತದೆ ಗಂಟಲು. 

ಹಕ್ಕಿ ಸ್ವಭಾವ, 

ಬೆಚ್ಚಬೇಕಿಲ್ಲ.  

ಕಚ್ಚುವುದಿಲ್ಲ !! 

 


Tuesday, 12 July 2022

ಸಾಗಲಿ ಚಿತ್ತ ಹರಿಯತ್ತ !

 

ಮನುಷ್ಯ ಬುದ್ಧಿಗೆ ಅತೀತವಾದ, ದೇವರು ಅಥವಾ ಹಾಗೆ ಕರೆಸಿಕೊಳ್ಳುವ ಒಂದು ಶಕ್ತಿ, ಉಂಟೇ -

ಇಲ್ಲವೇ ಎಂಬುದು ಕಾಲಾನುಕಾಲದಿಂದ ವಿನಾಕಾರಣ ಚರ್ಚೆಗೊಳಗಾದ ಒಂದು ಪ್ರಶ್ನೆ. ನನಗೆ ತಿಳಿದ

ಮಟ್ಟಿಗೆ, ಅಂಥ ಶಕ್ತಿಯೊಂದು ಉಂಟೆಂದಾಗಲೀ ಇಲ್ಲವೆಂದಾಗಲೀ, ನಮ್ಮ ಬುದ್ಧಿಗೆ ನಿಲುಕುವಂಥ

ಪುರಾವೆಯ ಸಹಿತ ಸಮರ್ಥಿಸಿಕೊಳ್ಳುವುದು ಅಸಾಧ್ಯವಾದ ಕೆಲಸ. ಆದರೆ ನಾವು ಸುಮ್ಮನೆ

ಕೂಡುವವರಲ್ಲ. ಇದೆ - ಇಲ್ಲ ಎಂಬ ಎರಡೂ ಪಕ್ಷಗಳು ತಮ್ಮ ತಮ್ಮ ಸಮರ್ಥನೆಯ ವ್ಯರ್ಥ

ಪ್ರಯತ್ನ ಮುಂದುವರೆಸುತ್ತಲೇ ಇರುವವರು. 


ದೇವರಿಲ್ಲ ಎನ್ನುವವರ ಚಟುವಟಿಕೆ ಮೇಲೆ ತಿಳಿಸಿದ ಚರ್ಚೆಗಷ್ಟೇ ಸೀಮಿತವಾಯಿತು. ಅವರು ತಮ್ಮ

ಕಣ್ಣಿಗೆ ಕಾಣುವಷ್ಟನ್ನು ಮಾತ್ರ ನೋಡಿಕೊಂಡು, ತಮ್ಮ ಬುದ್ಧಿಗೆ ಸಿಕ್ಕಷ್ಟನ್ನು ತಿಳಿದುಕೊಂಡು ಕೂತರಾಯಿತು.

ದೇವರಿದ್ದಾನೆನ್ನುವವರ ಕೆಲಸ ಅಲ್ಲಿಗೆ ಮುಗಿಯಲಿಲ್ಲ. ಎಲ್ಲಿದ್ದಾನೆ ? ಹೇಗಿದ್ದಾನೆ ?

ಅವನಿಗೂ/ಅವಳಿಗೂ /ಅದಕ್ಕೂ ನಮಗೂ ಸಂಬಂಧವೇನು? ಆ ಶಕ್ತಿಯ ಶಕ್ತಿ ಎಷ್ಟು? ಅದನ್ನು ಉಪಾಸಿಸುವ,

ಒಲಿಸಿಕೊಳ್ಳುವ ಬಗೆ ಹೇಗೆ ? ಇತ್ಯಾದಿ ಇತ್ಯಾದಿ ಹತ್ತಾರು ಪ್ರಶ್ನೆಗಳಿಗೆ ಹತ್ತಾರು ತೆರನಾದ ಉತ್ತರಗಳು,

ವಿಶ್ಲೇಷಣೆಗಳು. 


ಆಯಿತು. ನಂಬಿಕೆ ಉಳ್ಳವರೆಲ್ಲರೂ ಆ ಬುದ್ಧಿಗೆ ನಿಲುಕದ ವಸ್ತುವನ್ನು ತಮ್ಮ ತಮ್ಮ ಬುದ್ಧಿ, ತಮ್ಮ ತಮ್ಮ

ಭ್ರಮೆಗಳಿಗೆ ತಕ್ಕಂತೆ ಅರಿತುಕೊಳ್ಳಲಿ, ನಂಬಿಕೊಳ್ಳಲಿ, ನಡೆದುಕೊಳ್ಳಲಿ ಎಂದು ಸುಮ್ಮನಿರುವಂತಿಲ್ಲ.

ನಮ್ಮ ತಿಳುವಳಿಕೆಯೇ ಸರಿ, ಮತ್ತೆಲ್ಲರೂ ತಪ್ಪು ಎಂಬ ಹಠ.  ಇರಲಿ, ಇದೆಲ್ಲಾ ಬಗೆ ಹರಿಯದ

ವಿಷಯಗಳು. 


ಇಲ್ಲಿ ಕೆಳಗೆ ಕಾಣಿಸಿರುವ, ನಾನು ಬರೆದ ಒಂದು ಪದ್ಯದ ಬಗ್ಗೆ ಕೊಂಚ ವಿವರಣೆ ಅಗತ್ಯ ಎನಿಸಿತು. ಅದಕ್ಕೆ

ಪೀಠಿಕೆಯಾಗಿ ಮೇಲಿರುವ ಬರಹ. ನಾನು ಜನ್ಮತಳೆದದ್ದು ಮಾಧ್ವ ಬ್ರಾಹ್ಮಣ ಸಂಸಾರದಲ್ಲಿ. ನನ್ನ ರೀತಿ, ನೀತಿ,

ಆಚರಣೆಗಳು ಮಾಧ್ವ ಸಂಪ್ರದಾಯವನ್ನು ಅನುಸರಿಸಿವೆ. ಆದರೆ ಮಾಧ್ವ ಸಿದ್ಧಾಂತದ ಬಗ್ಗೆ ನನಗೆ ಹೆಚ್ಚು

ತಿಳುವಳಿಕೆ ಇಲ್ಲ. ನನಗಿರುವ ಕೊಂಚ  ತಿಳುವಳಿಕೆಗೆ ಎಟುಕಿದಂತೆ -  ಒಂದು ಜೀವ, ಪರಮಾತ್ಮನ ಬಗ್ಗೆ

ಜ್ಞಾನ ಪಡೆಯಬೇಕಾದರೆ, ಆ ಜೀವಕ್ಕೆ ಇರಬೇಕಾದ ಪ್ರಜ್ಞೆ, ಜೀವದಿಂದ ಆಗಬೇಕಾದ ಸಾಧನೆ ಮತ್ತು ಅದಕ್ಕೆ

ಬೇಕಾದ ದೈವ ಸಹಾಯ ಇವುಗಳನ್ನು ಸೂಚಿಸುವ ಒಂದು ಪದ್ಯ ಇದು. ಮಧ್ವ ಸಿದ್ಧಾಂತದ ಅರಿವಿಲ್ಲದವರಿಗೆ

ಈ ಪದ್ಯದ ಭಾವ ಪೂರ್ತಿ ತಿಳಿಯದೇ ಇರಬಹುದು. ಅಡ್ಡಿಯಿಲ್ಲ. ತಿಳಿಯಬೇಕೆನ್ನುವವರು ಕೇಳಿದರೆ, ನನಗೆ

ತಿಳಿದದ್ದನ್ನು ತಿಳಿಸುತ್ತೇನೆ ! 


ಹರಿಯ ಅರಿವಾಗಲು ಬೇಕು ಸಿರಿಯ ನೆರವು

ಪೊರೆಯಬೇಕು ಗರುಡನ ಗರಿಯ ಹರಿವು

ಹರಿಯುತಿರಬೇಕು ಸದಾ ಹರಿಯತ್ತ ಚಿತ್ತ 

ಸಿರಿರಮಣ ನಿಗಮಕ್ಕೆ ನಿಲುಕದವನತ್ತ 


ಕರ್ಮ ಸಾಂಖ್ಯಗಳ ಮರ್ಮ ತಿಳಿಯಬೇಕು 

ಧರ್ಮ ಮಾರ್ಗದಿ ಕರ್ಮ ನಡೆಯಬೇಕು 

ನಿರ್ಮಮ ನಿಷ್ಕಾಮ ನೇಮವಿರಬೇಕು   

ದುರ್ಮತ ದುರ್ವಾದ ದೂರಸರಿಯಬೇಕು  


ಹರಿಯೆ ಸರ್ವೋತ್ತಮನೆಂದರಿಯಬೇಕು 

ಗುರುವರರಿಟ್ಟ ಮಾರ್ಗ ಗಮಿಸಬೇಕು  

ತಾರತಮ್ಯವ ತಿಳಿದು ಜ್ಞಾನಗಮ್ಯನ ಭಜಿಸಿ  

ಪಾರಮಾರ್ಥದ ಹಾದಿಯಲಿ ಸಾಗಬೇಕು 


ಗುಣ ಅಗಣಿತನ ಕಣಕಣದಿ ಕಾಣಬೇಕು 

ಗುಣಸತ್ವವದು ಎತ್ತರಕೆ ಏರಬೇಕು 

ಪ್ರಾಣದೇವನ ಪಾದ ಪಿಡಿಯಬೇಕು

ಗುಣಪರಿಪೂರ್ಣನೆಡೆಗೆ ಸಾಗಬೇಕು.    



Sunday, 12 June 2022

ಮುಂಗಾರು - ಬೀರು - ನಾರಾಯಣಾಯಸ್ವಾಹಾ





ಮುಂಗಾರಿನ ಮಳೆ ಹಿಡಿಯುತ್ತದೆ ಸೋನೆ 

ಒಮ್ಮೊಮ್ಮೆ ಬಡಿಯುತ್ತದೆ ಜಡಿದು 

ಸಾಕಾಗಿ ಜಿನುಗುತ್ತ ಮಲಗುತ್ತದೆ 

ಹಾಗೆಯೇ ಸುತ್ತಿ ಸುಳಿದು 



ಸೂರ್ಯನೂ ಮಲಗಿರುತ್ತಾನೆ 

ಒಮ್ಮೊಮ್ಮೆ ಕಣ್ತೆರೆದು 

ಕಿರಣಗಳನ್ನು ತೂರಿಸುತ್ತಾನೆ 

ಮೋಡಗಳ ಸಂದಿಯಿಂದ 



ಬೀದಿ ದೀಪಗಳಿಗೂ 

ಮುಂಗಾರಿನ ರಜೆ 

ಆಗೀಗ ಮಿಣ್ಣಗೆ ಮಿಣುಕುತ್ತವೆ 

ಮತ್ತೆ ತಣ್ಣಗೆ ಮಲಗುತ್ತವೆ 



ನನ್ನ ತಿರುಗಾಟದ ಹುಚ್ಚು ನನಗೆ 

ಸುರಿವ ಮಳೆಯಲ್ಲೂ 

ಕೊಡೆಹಿಡಿದು ನಡೆಯುತ್ತೇನೆ 

ಕತ್ತಲಲ್ಲಿ ಕೊಚ್ಚೆ ತುಳಿಯುತ್ತೇನೆ 



ನನ್ನ ಕತ್ತಲೆಯ ದಾರಿಯಲ್ಲುಂಟು 

ಪೆದ್ರುವಿನ ಗಡಂಗು 

ಗಡಂಗೆಂದರೆ ತಿಳಿಯಿತೇ?

ಬಾರು ರೆಸ್ಟಾರೆಂಟು 



ಅವನ ರೆಸ್ಟಾರೆಂಟಿಗೆ 

ಅಂಟಿಕೊಂಡಿರುವ 

ನಿತ್ಯದ ಗಿರಾಕಿಗಳುಂಟು 

ನಾಯ್ಕ, ಪರಬ, ಪಿಂಟು 



ಬಾರಿನ ನಂದಾದೀಪದ 

ಮಂದಬೆಳಕಿನಲ್ಲಿ 

ಕೂತು ಮೇಜಿನ ಮುಂದು 

ಗುಟುಕರಿಸುತ್ತಾರೆ ಗುಂಡು 



ಜತೆಗುಂಟು ಪೆದ್ರುವಿನ ಪತ್ನಿಯ 

ಹೆಸರಾಂತ ಕೈರುಚಿ 

ಹುರಿದ ಮೀನು, ಕರಿದ ಕೋಳಿ 

ಮತ್ತು ಪಕ್ಕದ ಪೊದೇರನ ಪೋಳಿ  



ಅದೇನು ನಿಶ್ಯಬ್ದ ತನ್ಮಯತೆ 

ಆನಂದ ಶಾಂತಿ 

ಕಾಣಸಿಗದು ನಿಮಗೆಲ್ಲೂ 

ಯಾವ ಧ್ಯಾನಮಂದಿರದಲ್ಲೂ !



ನನ್ನ ಮನಸ್ಸೆನ್ನುತ್ತದೆ 

ನೋಡುತ್ತ ನಿಲ್ಲಬೇಡ ಗುಗ್ಗು 

ಒಳಗೆ ನುಗ್ಗು 

ಹಾಕೊಂದು ಪೆಗ್ಗು !



ಆದರೆ ನೋಡಿ, ಈ ಸಂಸಾರದ 

ಕೋಟಲೆಯಿಂದ ಪಾರಾಗಿ 

ಭಗವಂತನೆಡೆಗೆ ಅಡಿಯಿಡುವುದು 

ಅದೆಷ್ಟು ಕಷ್ಟವೋ 



ಭಗವಂತನ ಕೋಟಲೆಯಿಂದ 

ಬಿಡಿಸಿಕೊಂಡು 

ಬಾರಿನೊಳಗೆ ನುಗ್ಗುವುದೂ 

ಅಷ್ಟೇ ಕಷ್ಟ 



ಹಾಗಾಗಿ ನಾನು 

ನಿರಾಸೆಯಿಂದ ನೋಡುತ್ತಲೇ 

ನಿಧಾನವಾಗಿ ಕಾಲೆಳೆಯುತ್ತೇನೆ 

ಕತ್ತಲೆಯಲ್ಲಿ ಮನೆಗೆ 



ಕಾಲ್ತೊಳೆದು ಕೂತು, ಮರೆತು ಬೀರು,

ಹೀರುತ್ತೇನೆ ಕೈಯಿಂದ ನೀರು 

ಕೇಶವಾಯಸ್ವಾಹಾ, ನಾರಾಯಣಾಯಸ್ವಾಹಾ, 

ಮಾಧವಾಯಸ್ವಾಹಾ ..... ....... 



(ಪೊದೇರ - ಪೋರ್ಚುಗೀಸಿನ ‘padeiro’ ಶಬ್ದ ರೂಪಾಂತರಗೊಂಡು ಗೋವೆಯ ಕೊಂಕಣಿಯಲ್ಲಿ 

‘ಪೊದೇರ’ ಆಗಿದೆ. ರೊಟ್ಟಿಮಾಡುವವ, ‘baker’ ಎಂದರ್ಥ.   ‘ಪೋಳಿ’ - ಕಚ್ಚಾ ಗೋಧಿಹಿಟ್ಟಿನಿಂದ

ತಯಾರಿಸಿದ ಗುಂಡನೆಯ, ದಪ್ಪವಾದ, ಮೆದುವಾದ ರೊಟ್ಟಿ.   ) 







  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...