ಸುಪ್ರಭಾತ
ಬೆಲ್ಲದಂಥ ನಿದ್ದೆಕಳೆದು
ಮೆಲ್ಲನೆ ಕಣ್ಣ ತೆರೆವಾಗ
ಗಲ್ಲಿಯ ಮಸೀದಿಯಲ್ಲಿ
ಅಲ್ಲಾನ ಹೆಸರೆತ್ತಿ
ಮುಲ್ಲಾ ಕರೆಯುತ್ತಿದ್ದ
ಎಲ್ಲಾ ಬನ್ನಿರೆಂದು !
ದಿಟವೆನಿಸಿದ್ದನ್ನು, ದಿಟ್ಟವಾಗಿ
ಎಲ್ಲರಿಗೂ ಎಟಕುವಂತೆ
ನಾಲ್ಕು ಸಾಲುಗಳಲ್ಲಿ ಭಟ್ಟಿಯಿಳಿಸಿ,
ಚುಟುಕಬರೆದು ಪುಟದಲ್ಲಿರಿಸಿ
ಓದುಗರೆಲ್ಲರ ಮನತಟ್ಟಿದ
ಚುಟುಕುಬ್ರಹ್ಮ ದಿಟ್ಟ ದಿನಕರರಿಗೆ
ತಟ್ಟುವೆ ಈ ಮೂಲಕ, ನನ್ನ ಚಪ್ಪಾಳೆ !
ಮತ್ತೊಂದು ಚುಟುಕ. ಅದರ ಹಿನ್ನೆಲೆ ಹೀಗಿದೆ. ನಾನು ಮುಂಜಾನೆ
ಸಂಚಾರಕ್ಕೆ ಹೋಗುವಾಗ ನನ್ನೊಡನೆ ಕೆಲವು ಸ್ನೇಹಿತರೂ
ಇರುವುದುಂಟು. ವಿವಿಧ ಮನೋಭಾವಗಳ, ಅನೇಕ
ವಯೋಮಾನಗಳ ಮಿತ್ರರ ಗುಂಪು ಅದು.
ಮೊನ್ನೆ ಬೆಳಗ್ಗೆ ನಾವು ನಡೆಯುತ್ತಿದ್ದಾಗ, ಎದುರಿನ ಗುಡ್ಡಗಳಮೇಲೆ
ಆಗತಾನೇ ಸೂರ್ಯ ಕಾಣಿಸಿಕೊಳ್ಳುತ್ತಿದ್ದ. ಬಗೆ ಬಗೆಯ ಬಣ್ಣಗಳ
ನಾಟ್ಯ ನಡೆದಿತ್ತು. ಎಲ್ಲರೂ ಅದನ್ನು ನೋಡಿ ಮೆಚ್ಚಿ
ಮಾತನಾಡುತ್ತಿದ್ದಾಗ, ಒಬ್ಬ ತರುಣ ಮಿತ್ರ, ಎದುರಿನಿಂದ
ಬರುತ್ತಿದ್ದ ತರುಣಿಯ ಕಡೆ ನೋಡುತ್ತಾ ಹೇಳಿದ
“ಸೂರ್ಯೋದಯಕ್ಕಿಂತ ಸುಂದರವಾದದ್ದು ಬೇಕಾದಷ್ಟಿದೆ !”
ಆ ಮಾತಿನಿಂದ ಪ್ರೇರಿತವಾದದ್ದು ಈ ಚುಟುಕ.
ಪ್ರಾಸಬದ್ಧವಾದ ಒಂದು ವಿನೋದವಷ್ಟೇ. ಮತ್ತೇನೂ ಅಲ್ಲ.
ದೂರಬೆಟ್ಟಗಳ ಹಸಿರು ಶಿಖರಗಳ
ಎತ್ತರದ ಸುತ್ತಮುತ್ತ
ನೆರೆದ ಮೇಘಗಳೊಡನೆ ಎಳೆರವಿಯ ಕಿರಣಗಳ
ಬಗೆಬಗೆಯ ರಂಗಿನಾಟ
ದಿನಮಣಿಯ ಕಂಡು ಮನ ತಣಿಯಲೆಂದು
ಭಗವಂತ ಕಣ್ಗಳಿತ್ತ.
ಅವನಿತ್ತ ಕಣ್ಣು ಕುಣಿಯುತ್ತಲಿತ್ತು
ಲಲನಾಮಣಿಯ ಸುತ್ತಮುತ್ತ
No comments:
Post a Comment