Sunday, 12 June 2022

ಮುಂಗಾರು - ಬೀರು - ನಾರಾಯಣಾಯಸ್ವಾಹಾ





ಮುಂಗಾರಿನ ಮಳೆ ಹಿಡಿಯುತ್ತದೆ ಸೋನೆ 

ಒಮ್ಮೊಮ್ಮೆ ಬಡಿಯುತ್ತದೆ ಜಡಿದು 

ಸಾಕಾಗಿ ಜಿನುಗುತ್ತ ಮಲಗುತ್ತದೆ 

ಹಾಗೆಯೇ ಸುತ್ತಿ ಸುಳಿದು 



ಸೂರ್ಯನೂ ಮಲಗಿರುತ್ತಾನೆ 

ಒಮ್ಮೊಮ್ಮೆ ಕಣ್ತೆರೆದು 

ಕಿರಣಗಳನ್ನು ತೂರಿಸುತ್ತಾನೆ 

ಮೋಡಗಳ ಸಂದಿಯಿಂದ 



ಬೀದಿ ದೀಪಗಳಿಗೂ 

ಮುಂಗಾರಿನ ರಜೆ 

ಆಗೀಗ ಮಿಣ್ಣಗೆ ಮಿಣುಕುತ್ತವೆ 

ಮತ್ತೆ ತಣ್ಣಗೆ ಮಲಗುತ್ತವೆ 



ನನ್ನ ತಿರುಗಾಟದ ಹುಚ್ಚು ನನಗೆ 

ಸುರಿವ ಮಳೆಯಲ್ಲೂ 

ಕೊಡೆಹಿಡಿದು ನಡೆಯುತ್ತೇನೆ 

ಕತ್ತಲಲ್ಲಿ ಕೊಚ್ಚೆ ತುಳಿಯುತ್ತೇನೆ 



ನನ್ನ ಕತ್ತಲೆಯ ದಾರಿಯಲ್ಲುಂಟು 

ಪೆದ್ರುವಿನ ಗಡಂಗು 

ಗಡಂಗೆಂದರೆ ತಿಳಿಯಿತೇ?

ಬಾರು ರೆಸ್ಟಾರೆಂಟು 



ಅವನ ರೆಸ್ಟಾರೆಂಟಿಗೆ 

ಅಂಟಿಕೊಂಡಿರುವ 

ನಿತ್ಯದ ಗಿರಾಕಿಗಳುಂಟು 

ನಾಯ್ಕ, ಪರಬ, ಪಿಂಟು 



ಬಾರಿನ ನಂದಾದೀಪದ 

ಮಂದಬೆಳಕಿನಲ್ಲಿ 

ಕೂತು ಮೇಜಿನ ಮುಂದು 

ಗುಟುಕರಿಸುತ್ತಾರೆ ಗುಂಡು 



ಜತೆಗುಂಟು ಪೆದ್ರುವಿನ ಪತ್ನಿಯ 

ಹೆಸರಾಂತ ಕೈರುಚಿ 

ಹುರಿದ ಮೀನು, ಕರಿದ ಕೋಳಿ 

ಮತ್ತು ಪಕ್ಕದ ಪೊದೇರನ ಪೋಳಿ  



ಅದೇನು ನಿಶ್ಯಬ್ದ ತನ್ಮಯತೆ 

ಆನಂದ ಶಾಂತಿ 

ಕಾಣಸಿಗದು ನಿಮಗೆಲ್ಲೂ 

ಯಾವ ಧ್ಯಾನಮಂದಿರದಲ್ಲೂ !



ನನ್ನ ಮನಸ್ಸೆನ್ನುತ್ತದೆ 

ನೋಡುತ್ತ ನಿಲ್ಲಬೇಡ ಗುಗ್ಗು 

ಒಳಗೆ ನುಗ್ಗು 

ಹಾಕೊಂದು ಪೆಗ್ಗು !



ಆದರೆ ನೋಡಿ, ಈ ಸಂಸಾರದ 

ಕೋಟಲೆಯಿಂದ ಪಾರಾಗಿ 

ಭಗವಂತನೆಡೆಗೆ ಅಡಿಯಿಡುವುದು 

ಅದೆಷ್ಟು ಕಷ್ಟವೋ 



ಭಗವಂತನ ಕೋಟಲೆಯಿಂದ 

ಬಿಡಿಸಿಕೊಂಡು 

ಬಾರಿನೊಳಗೆ ನುಗ್ಗುವುದೂ 

ಅಷ್ಟೇ ಕಷ್ಟ 



ಹಾಗಾಗಿ ನಾನು 

ನಿರಾಸೆಯಿಂದ ನೋಡುತ್ತಲೇ 

ನಿಧಾನವಾಗಿ ಕಾಲೆಳೆಯುತ್ತೇನೆ 

ಕತ್ತಲೆಯಲ್ಲಿ ಮನೆಗೆ 



ಕಾಲ್ತೊಳೆದು ಕೂತು, ಮರೆತು ಬೀರು,

ಹೀರುತ್ತೇನೆ ಕೈಯಿಂದ ನೀರು 

ಕೇಶವಾಯಸ್ವಾಹಾ, ನಾರಾಯಣಾಯಸ್ವಾಹಾ, 

ಮಾಧವಾಯಸ್ವಾಹಾ ..... ....... 



(ಪೊದೇರ - ಪೋರ್ಚುಗೀಸಿನ ‘padeiro’ ಶಬ್ದ ರೂಪಾಂತರಗೊಂಡು ಗೋವೆಯ ಕೊಂಕಣಿಯಲ್ಲಿ 

‘ಪೊದೇರ’ ಆಗಿದೆ. ರೊಟ್ಟಿಮಾಡುವವ, ‘baker’ ಎಂದರ್ಥ.   ‘ಪೋಳಿ’ - ಕಚ್ಚಾ ಗೋಧಿಹಿಟ್ಟಿನಿಂದ

ತಯಾರಿಸಿದ ಗುಂಡನೆಯ, ದಪ್ಪವಾದ, ಮೆದುವಾದ ರೊಟ್ಟಿ.   ) 







Saturday, 2 April 2022

ಯುಗಾದಿಯ ಶುಭದಿನದಂದು ಕೊಂಚ ಚಿಂತನೆ ಮತ್ತು ಸ್ತುತಿ.  



ಏನೋ ಓದಿದಾಗಲೋ, ಕೇಳಿದಾಗಲೋ, ಅಥವಾ ಮತ್ಯಾವುದೋ ಚಿಂತನೆಯಸಮಯದಲ್ಲೋ

ನನ್ನ ಮನದಲ್ಲಿ ಮೂಡುವ ಕೆಲವು ವಿಷಯಗಳನ್ನು ಅಥವಾ ಭಾವನೆಗಳನ್ನು ಒಂದು

ಬರಹದರೂಪಕ್ಕೆ ತಂದಿರಿಸುವುದು 

ನನ್ನ ದೊಂದು ಹವ್ಯಾಸ.  ಅದು ಗದ್ಯರೂಪದಲ್ಲಿರಬಹುದು ಅಥವಾ ಪದ್ಯವಾಗಿರಬಹುದು.

ತಲೆಯಲ್ಲಿ ಸುಳಿದಾಡುವ ವಿಷಯಗಳಿಗೆ ರೂಪಕೊಟ್ಟು ಒಂದೆಡೆ ಬರೆದಿರಿಸಿದಾಗ  ಅದೇನೋ

ಸಮಾಧಾನ. ಈ ಬರಹಗಳನ್ನು ಮತ್ತೊಬ್ಬರು ಓದಿ ಮೆಚ್ಚಿದರೆ  ಮನದಲ್ಲಿ ಒಂದು ಸಾರ್ಥಕ

ಭಾವನೆ ಮೂಡುತ್ತದೆ. ಆ ಸಾರ್ಥಕ ಭಾವನೆಯ ಹಿಂದೆಯೇ ತಲೆಯೆತ್ತುವುದು ಅಹಂಭಾವ.

ನಾನು ಇಂಥ ಬರಹವನ್ನು ಬರೆಯಲು (ಕಾರ್ಯವನ್ನು ಮಾಡಲು) ಶಕ್ತನಾಗಿದ್ದೇನೆಂಬ ಅಹಂಭಾವ. 


ನಾನು ಬರೆದ ಬರಹ ನನ್ನೊಬ್ಬನದೇ ಪ್ರಯತ್ನವೇ ? ಅಲ್ಲ. ಅದರ ಹಿಂದೆ ನಾನು ಓದಿದ

ಅನೇಕ ಪುಸ್ತಕಗಳ ಪ್ರಭಾವವಿದೆ. ಮತ್ತೊಬ್ಬರಿಂದ ಕೇಳಿದ ಅನೇಕ ವಿಷಯಗಳ ಪ್ರಭಾವವಿದೆ.

ನನಗೆ ಓದು ಬರಹ ಕಲಿಸಿಕೊಟ್ಟ ಅಧ್ಯಾಪಕರ ಪ್ರಯತ್ನವಿದೆ. ನಿತ್ಯ ಜೀವನದಲ್ಲಿ ಕಾಣುವ,

ಕೇಳುವ, ಒಡನೆ ವ್ಯವಹರಿಸುವ ಅನೇಕರಿಂದ ಅಪ್ರಯತ್ನವಾಗಿ, ಪ್ರಾಸಂಗಿಕವಾಗಿ ತಿಳಿದುಕೊಂಡಿದ್ದು,

ಬರಹದಲ್ಲಿ ಅಳವಡಿಸಿಕೊಂಡಿರುವ ವಿಷಯಗಳಿವೆ, ತಂದೆ ತಾಯಿಯರಿತ್ತ  ಸಂಸ್ಕಾರದ ಪ್ರಭಾವವಿದೆ. 

ಸ್ನೇಹಿತರೊಡನೆ ನಡೆಸಿದ ಬಿರಟೆಯಿಲ್ಲದ ಹರಟೆಯ ಪ್ರಭಾವವಿದೆ. ಒಟ್ಟಿನಲ್ಲಿ, ನನ್ನ ಬುದ್ಧಿಗೆ ತಿಳಿಯುವ,

ತಿಳಿಯದ, ಅನೇಕ ಶಕ್ತಿಗಳು ನನ್ನ ಬರಹದ ಹಿಂದೆ ಇವೆ. ನನ್ನ ಇಂದ್ರಿಯಗಳಿಗೆ ಎಟುಕಿದೆಲ್ಲವನ್ನೂ 

ತಲೆಯಲ್ಲಿ ಮಂಥನಮಾಡಿ, ನನ್ನ ತಿಳುವಳಿಕೆಯನ್ನು ಅದಕ್ಕೆ ಸೇರಿಸಿ ಬರೆದ ಪ್ರಯತ್ನ, ಶಕ್ತಿ, ನನ್ನದೇ.

ಆದ್ದರಿಂದ ನಾನು ಬರೆದದ್ದು ನನ್ನ ಸ್ವಂತ ಪ್ರಯತ್ನ ಅಥವಾ ಶಕ್ತಿಯಿಂದಲೇ ಎಂದು ತಿಳಿದು ಗರ್ವ

ಪಡುವುದರಲ್ಲಿ ತಪ್ಪೇನೂ ಇಲ್ಲ.  ಆದರೆ ಅಂಥ ತಿಳುವಳಿಕೆ, ‘ಅಹಂಭಾವ’ ಎನಿಸಿಕೊಳ್ಳುತ್ತದೆ.

ಮಾನವ ಸ್ವಭಾವದಲ್ಲಿರುವ ತ್ರಿಗುಣಗಳಲ್ಲಿ ಒಂದಾದ ‘ರಾಜಸಗುಣ’ ವಾಗುತ್ತದೆ. 


“ನನ್ನ ಬರಹ ನನ್ನ ಪ್ರಯತ್ನವಾದರೂ ಅದರ ಹಿಂದೆ ನನಗೆ ಕಾಣದ, ಅವಗಾಹನೆಗೆ ಬಾರದ,

ಅನೇಕ ಶಕ್ತಿಗಳ ಪ್ರಭಾವವಿದೆ. ಅದು ಪೂರ್ಣವಾಗಿ ನನ್ನದಲ್ಲ. ನಾನು ನನ್ನ ಬರಹಕ್ಕೆ ಸಹಾಯಮಾಡಿದ

ಆ ಶಕ್ತಿಗಳಿಗೆ ನಾನು ಋಣಿಯಾಗಿದ್ದೇನೆ” ಎಂಬ ದೈನ್ಯಪೂರ್ಣ ಭಾವನೆ ನನ್ನ ಗರ್ವವನ್ನು ಇಳಿಸುತ್ತದೆ.

ಅಹಂ ಅನ್ನು ಕಡಿಮೆಮಾಡುತ್ತದೆ. ಅದು ‘ಸಾತ್ವಿಕ ಗುಣ’.  


ಈ ರೀತಿ ನಮ್ಮ ಎಲ್ಲಾ ಕಾರ್ಯಗಳ ಹಿಂದೆ ಇದ್ದು, ನಮ್ಮ ಮೇಲೆ ಪ್ರಭಾವಬೀರಿ, ನಮ್ಮಿಂದ ಕ್ರಿಯೆಗಳನ್ನು

ಆಗಮಾಡಿಸುವ, ಮೇಲೆ ತಿಳಿಸಿರುವ, ಅನೇಕ ಶಕ್ತಿಗಳಲ್ಲಿ ಒಂದೊಂದನ್ನೂ ಒಂದೊಂದು ಹೂಗಳೆಂದು ಭಾವಿಸಿ,

ಅವೆಲ್ಲವುಗಳ ಒಟ್ಟು ರೂಪವನ್ನು  ಒಂದು ಪುಷ್ಪಮಾಲೆಯೆಂದು ಪರಿಗಣಿಸೋಣ.  ಆ ಮಾಲೆಯೊಳಗಣ

ಎಲ್ಲ  ಶಕ್ತಿಗಳಿಗೂ ಪ್ರೇರಕವಾಗಿದ್ದು, ಅವೆಲ್ಲವನ್ನೂ ಒಟ್ಟಿಗೆ ಸೇರಿಸಿ, ನಮ್ಮ - ಅವುಗಳ ಸಂಭಂದವನ್ನು ರೂಪಿಸಿ,

“ಮಾಲೆಯೊಳಗಿನ ದಾರದಂತೆ, ನಮಗೆ ಕಾಣದಂತೆ, ಸುಳಿದಾಡುತ್ತಿರುವ ಮಹಾ ಶಕ್ತಿಯನ್ನು ಭಗವಂತ

ಎನ್ನಬಹುದು” ಎಂದು ಪೂಜ್ಯ ಡಿ ವಿ ಜಿ ಯವರು “ಜೀವನ ಧರ್ಮ ಯೋಗ” ದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.  


ಆ ‘ಭಗವಂತ’ ನೆಂಬ ತಿಳುವಳಿಕೆ ಅನೇಕ ಬುದ್ಧಿ, ಸ್ವಭಾವ, ಅಭಿರುಚಿ ಗಳಿಗೆ ತಕ್ಕಂತೆ ಅನೇಕರೀತಿಗಳಲ್ಲಿ

ವ್ಯಕ್ತವಾಗಿ ನಮ್ಮ ಆಧ್ಯಾತ್ಮ ಚಿಂತನೆ, ಸಂಪ್ರದಾಯಗಳನ್ನು ರೂಪಿಸಿ, ಆಯಾ ಚಿಂತನೆಗಳಿಗೆ ತಕ್ಕ ದೇವರು,

ದೇವಸ್ಥಾನ, ಪೂಜೆ, ಆಚರಣೆಗಳಿಗೆ ಎಡೆಮಾಡಿ ಕೊಟ್ಟಿದೆ. 


ನಾನು ಹುಟ್ಟಿದ, ಬೆಳೆದ, ಕಂಡ, ಮತ್ತು ಅರಿತುಕೊಳ್ಳಲು ಪ್ರಯತ್ನಿಸುತ್ತಿರುವ ಮಾಧ್ವ ಬ್ರಾಹ್ಮಣ

ಸಂಪ್ರದಾಯದ ತಿಳುವಳಿಕೆ, ನಂಬಿಕೆಯಂತೆ, ನಾನು ಮಾಡುವ ಎಲ್ಲ ಕಾರ್ಯಗಳ ಪ್ರೇರಕ ಶಕ್ತಿ,

ಅಥವಾ ‘ಭಗವಂತ’ನನ್ನು  ಶ್ರೀ ಹರಿ - ನಾರಾಯಣ ಎನ್ನುತ್ತೇವೆ. ಅದನ್ನು ಮೀರಿದ ಶಕ್ತಿ ಮತ್ತೊಂದಿಲ್ಲ

ಎಂದು ನಂಬುತ್ತೇವೆ. “ಹರಿ ಸರ್ವೋತ್ತಮ”. ಅವನಿಗೆ ಅಧೀನವಾದ, ಸದಾ ಅವನಿಚ್ಛೆಯಂತೆ

ನಡೆಯುವ, ಅವನ ಚಿಂತನೆ, ಸೇವೆ, ಉಪಾಸನೆಗಳಲ್ಲಿ ನಿರಂತರ ತೊಡಗಿರುವ  ‘ಮುಖ್ಯಪ್ರಾಣ’

ಅಥವಾ ‘ವಾಯುದೇವರು’ ಎನಿಸಿಕೊಳ್ಳುವ ಮತ್ತೊಂದು ಶಕ್ತಿ ಇದ್ದು, ಅದು ಶ್ರೀಹರಿಯ

ಇಚ್ಛೆಗನುಗುಣವಾಗಿ ನನ್ನ ಬುದ್ಧಿಯನ್ನು ಪ್ರಚೋದಿಸಿ ನನ್ನಿಂದ ಸರ್ವ ಕಾರ್ಯಗಳನ್ನು ಮಾಡಿಸುತ್ತದೆ

ಮತ್ತು ಅದರ ಪ್ರಭಾವ ಪ್ರತಿಕ್ಷಣವೂ ನನ್ನೊಡನೆ ಇರುತ್ತದೆಂದು ನಂಬುತ್ತೇವೆ. 


ನನ್ನ ಸಮಸ್ತ ಸಾಧನೆಗಳು ಶ್ರೀಹರಿ - ಪ್ರಾಣದೇವರ, ಪ್ರೇರಣೆ, ಶಕ್ತಿಯ ಮೂಲಕವೇ

ಸಾಧ್ಯವಾಯಿತೆಂದು ಕೊಳ್ಳುವುದು ನನ್ನ ಅಹಂಭಾವವನ್ನು ಕಡಿತಗೊಳಿಸಿ, ಸಾತ್ವಿಕತೆಯನ್ನು

ಪ್ರಚೋದಿಸುತ್ತದೆ. ಸಾತ್ವಿಕತೆ ಹೆಚ್ಚಾದಷ್ಟು ವ್ಯಕ್ತಿಗೆ, ಸಮಾಜಕ್ಕೆ ಒಳಿತೆಂಬುದು ಎಲ್ಲರಿಗೂ

ವೇದ್ಯವಾಗಿರುವ ವಿಷಯ. ಇಂಥ ನಮ್ಮ ಚಿಂತನೆಯ ಸಾರವನ್ನು ಶ್ರೀ ರಾಘವೇಂದ್ರ ತೀರ್ಥರು

ತಮ್ಮ “ಪ್ರಾತಃ ಸಂಕಲ್ಪ ಗದ್ಯ” ದಲ್ಲಿ ತಂದಿರಿಸಿದ್ದಾರೆ.  ಆ ಗದ್ಯದಿಂದ ಪ್ರೇರಿತವಾದ ಈ ಕೆಳಗಿನ

ಪದ್ಯ ಶುಭಕೃತ್ ನಾಮ ಸಂವತ್ಸರದ ಮೊದಲ ದಿನದಂದು ಹರಿ-ವಾಯುಗಳಿಗೆ, ಸಮರ್ಪಣೆ. 

ಶುಭಕೃತ್ ನಾಮ ಸಂವತ್ಸರವು  ತಮ್ಮೆಲ್ಲರಿಗೂ ಶುಭತರಲೆಂದು ಹಾರೈಕೆ. 



ಸಕಲ ಗುಣ ಪರಿಪೂರ್ಣ ರೂಪ 

ನಿನಗಿಲ್ಲ ದೋಷ, ಲೇಶ ಪಾಪ   

ಸರ್ವ ದೇಹಕಧಿಪತಿಯು ನೀನು 

ಸರ್ವ ದೇಶಕಧಿಪತಿಯು ನೀನು 


ಹಕ್ಕಿಯಿಂಚರ ನಿನ್ನ ನಾಮ  

ಸಿಂಹ ಘರ್ಜನೆ ನಿನ್ನ ನಾಮ  

ನಭದಿ ಗುಡುಗದು ನಿನ್ನ ನಾಮ  

ಶರಧಿ ಮೊರೆತವು ನಿನ್ನ ನಾಮ 


ಘಂಟೆಯಿನಿದನಿ ನಿನ್ನ ನಾಮ  

ಭೇರಿ ಮಾರ್ದನಿ ನಿನ್ನ ನಾಮ  

ಮಂತ್ರ ಘೋಷವು ನಿನ್ನ ನಾಮ  

ಸಾಮಗಾನವು  ನಿನ್ನ ನಾಮ 


ಎನ್ನ ಕಿವಿಗೆ ಬಿದ್ದೆಲ್ಲ ನಾದ 

ನಿನ್ನ ನಾಮವಾಗಿರೆ, ಶ್ರೀಪಾದ,

ನನಗಿನ್ನೇಕೆ ವೇದ, ವಾದ?

ರಘುನಂದನಗೆ ಸಾಕು, ನಿನ್ನ ಪಾದ. 




Thursday, 24 March 2022

ಒಜ್ಜೆ - ಲಜ್ಜೆ



ಯಾವುದೋ ಮದುವೆಗೆ ಹೋಗಿದ್ದೆ. ಊಟಕ್ಕೆ ಕುಳಿತಿದ್ದಾಗ ಹಿಂದಿನಸಾಲಿನಲ್ಲಿದ್ದ ಹೆಂಗಳೆಯರ ಮಾತು ಕಿವಿಗೆ ಬೀಳುತ್ತಿತ್ತು. ಅದೂ, ಇದೂ, ಇಪ್ಪತ್ತೆಂಟು !  ಏನೋ ಪದಾರ್ಥ ಬಡಿಸಲು ಬಂದಾಗ ಒಬ್ಬಾಕೆ ತಮಗೆ ಬೇಡವೆಂದರು. ಪಕ್ಕದವರು “ಅದ್ಯಾಕೆ ? ಒಂದು ಹಾಕಿಸ್ಕೊಳ್ರಿ ಪರವಾಗಿಲ್ಲ”  ಎಂದಾಗ,  “ಅಯ್ಯೋ ಬೇಡಾರಿ, ವೆಯ್ಟ್ ಜಾಸ್ತೀನೇ ಆಗ್ತಾ ಇದೆ. ಏನೇನ್ ಮಾಡಿದ್ರೂ ಕಡಿಮೆಯಾಗಲ್ಲ. ನನ್ನಿಂದ ಸಾಧ್ಯವಿಲ್ಲ. ದೇವರೇಗತಿ.” ಎಂಬ ಉತ್ತರ ಬಂತು. ಆ ಸಂಭಾಷಣೆಯಿಂದ ಪ್ರೇರಿತವಾದ ಅಣಕು ಪದ್ಯ.  


ಹಸಿವ ಕೊಟ್ಟವ ನೀನು, ಹಿಟ್ಟು ಕೊಟ್ಟವ ನೀನು 

ಹಿಟ್ಟಿನೊಳಗೆ ನೀನು, ಹಿಟ್ಟನಟ್ಟುವ ಬೆಂಕಿಯಲಿ ನೀನು 

ಹಿಟ್ಟನುಂಡವ ನೀನು, ಉಂಡ ಹೊಟ್ಟೆಯೊಳು 

ಜಠರಾಗ್ನಿ ನೀನು. 


ನಿನ್ನ ಹಿಟ್ಟಿನಾಟದಿ ಬೆಳೆದ ಹೊಟ್ಟೆಯನೆನಗೆ ಕಟ್ಟಿ 

ಸೊಂಟಕ್ಕೆ ಕೈಯಿಟ್ಟು ನಿಂತೆಯಲಾ, ಹರಿ ವಿಠ್ಠಲ!

ಬೆಟ್ಟ ಹೊತ್ತವ ನಿನಗೆ ಭಾರವೆನಿಸಿದ ಹೊಟ್ಟೆಯನು  

ದಿಕ್ಕೆಟ್ಟ ನಾನೆಂತು ಹೊರಬೇಕೋ ಹರಿಯೇ?


ನಿನಗಸದಳವಾದ ಕಾರ್ಯವಿಲ್ಲೆಂಬ ಖ್ಯಾತಿ 

ಮೈ ಭಾರವ ಕಳೆವುದೆನಗಸದಳವೆಂಬ ಭೀತಿ 

ಹತ್ತುಬಾರಿ ಇಳಿದಿಳೆಯ ಭಾರ ಕಳೆದಿಹೆ ನೀನು  

ಒಮ್ಮೆ ಬಂದೆನ್ನ ಭಾರ ಕಳೆ, ಬೇಡುವೆನು ನಾನು 


ಆಗದಾಗದೆಂದೆನ್ನ ದೂಡಬೇಡವೊ ದೊರೆಯೇ 

ಒಜ್ಜೆ ನನಗಾದರೆ ಲಜ್ಜೆ ನಿನಗೋ ಹರಿಯೆ  

ಅಬ್ಜಜನಪ್ಪನೆನಿಪ್ಪ ಅರವಿಂದ ನಯನಾ 

ಸಂತತ ಪೊರೆಯೋ ಈ ರಘುನಂದನನ !




Tuesday, 15 March 2022

ಕರಾರವಿಂದೇ ಪದಾರವಿಂದಂ

ಭಾಗವತ ಪ್ರವಚನವೊಂದರಲ್ಲಿ ಕೃಷ್ಣ ಮಲಗಿದ್ದ ರೀತಿಯನ್ನು ಕೇಳಿದಾಗ ಸಂಸ್ಕೃತ ಶ್ಲೋಕವೊಂದು

ನೆನಪಾಯಿತು.  “ಕರಾರವಿಂದೇ ಪದಾರವಿಂದಂ, ಮುಖಾರವಿಂದೇ ವಿನಿವೇಶಯಂತಂ,

ವಟಸ್ಯ ಪತ್ರಸ್ಯ ಪುಟೇ ಶಯನಂ, ಬಾಲಂ ಮುಕುಂದಂ ಮನಸಾ ಸ್ಮರಾಮಿ”. ಅದನ್ನು ಕನ್ನಡದಲ್ಲಿ

ಒಂದು ಪದ್ಯವಾಗಿಸುವ ಪ್ರಯತ್ನ ಮಾಡಿದ್ದೇನೆ. 


ಕೆಂದಾವರೆ ಕರಗಳಿಂದ 

ಕೆಂದಾವರೆ ಪಾದ ಪಿಡಿದು 

ಕೆಂದಾವರೆ ಮೋರೆಯತ್ತ 

ಲೀಲೆಯಿಂದ ಸೆಳೆಯುತ್ತಾ  


ಹವಳಗೆಂಪು ಅಧರದೊಳಗೆ  

ಹವಳದಂಥ ಬೆರಳತಳ್ಳಿ   

ಆಲದೆಲೆಯ ಪಲ್ಲಂಗದಿ 

ವಿಲಾಸದಿಂದ ಪವಡಿಸಿರುವ 


ಫುಲ್ಲಲೋಚನ ಗೋವಿಂದ  

ಗೊಲ್ಲಬಾಲನನ್ನು  ನಮಿಸಿ

ನಲ್ಮೆಯಿಂದ ಪಾಲಿಸೆಂದು

ಒಲ್ಮೆಯಿಂದ ಬೇಡಿಕೊಂಬೆ.


ಕೃಷ್ಣಾರ್ಪಣಮಸ್ತು.  


Wednesday, 9 February 2022

ಶ್ರೀಮದಾನಂದತೀರ್ಥರ ಶ್ರೀಮಚ್ಚರಣಗಳಲ್ಲಿ

ಶ್ರೀ ಮಧ್ವಾಂತರ್ಗತ ಶ್ರೀ ಲಕ್ಷ್ಮಿನಾರಾಯಣರ ಪ್ರೇರಣೆಯಿಂದ, ಅವರ ಸೇವೆಯೆಂದು,

ಇಂದು ಮಧ್ವನವಮಿಯ ಶುಭ ಸಂಧರ್ಭದಲ್ಲಿ  ಶ್ರೀಮದಾನಂದತೀರ್ಥರ 

ಶ್ರೀಮಚ್ಚರಣಗಳಲ್ಲಿ ಸಮರ್ಪಣೆ 


ತ್ರೇತೆಯಲಿ ಹನುಮ ನೀ ಶ್ರೀರಾಮನ ಬಂಟ 

ದ್ವಾಪರದಲಿ ಭೀಮ, ನಮ್ಮ ಕೃಷ್ಣನ ನೆಂಟ 

ಕಲಿಯುಗದಿ ಅವತರಿಸಿ ಮಧ್ವರಾಯನೆಂದು 

ಉಡುಪಿಯಲಿ ನಿಲ್ಲಿಸಿದೆ ಕೃಷ್ಣನೆಳೆತಂದು !


ಪಾಕಶಾಸ್ತ್ರ ಪ್ರವೀಣ ದ್ವಾಪರದ ಭೀಮ 

ಶಾಸ್ತ್ರಪಾಕವಿಳಿಸಿದನಮ್ಮ ಮಧ್ವ ಮಹಿಮ 

ನೀ ಬರೆದ ಭಾಷ್ಯ, ತಾತ್ಪರ್ಯ, ಸಾರ 

ಹರಿಭಕ್ತಿ, ತಾರತಮ್ಯ, ಬೇಧ ನಮಗಾಧಾರ 


ತಂದೆ ನೀ, ತಾಯಿ ನೀ, ಗುರು ಭಾತೃ ನೀನು 

ಪ್ರಾಣ, ನೀನಿರುವವರೆಗೆ ಆಡುವೆನು ನಾನು 

ಕೃಪೆಮಾಡು ಹರಿಯಲ್ಲಿ, ನಿನ್ನಲ್ಲಿ, ಭಕ್ತಿ 

ನಿನ್ನ ಪಾದಧೂಳಿಯಿಂದಲೇ ನಮಗೆ ಮುಕ್ತಿ.   


ಶಾಸ್ತ್ರ ಪ್ರಕಾರವರಿಯೆ ಪಾಮರನು ನಾನು 

ಸಂಸಾರ ಕೂಪದೊಳು ಈಜುತಿಹ ಮೀನು 

ನನ್ನ ಮನ, ಒಳ ಹೊರಗ, ತಿಳಿದಿಹನು ನೀನು 

ಸ್ವಾಮಿ, ನೀ ಸತತ ಪೊರೆ ಈ ರಘುನಂದನನು 


Wednesday, 19 January 2022

ಶ್ರೀಹರಿಯ ಚರಣ + ಕೃಷ್ಣಾ ಎನಬಾರದೇ

ಚಣಕಾಲ ನೆನೆಯಿರಿ  ಶ್ರೀಹರಿಯ ಚರಣ 

ಚಿರಕಾಲ ಪಡೆಯಿರಿ ಸಿರಿಪತಿಯ ಕರುಣ

  

ಇಳೆಯನಳೆದು ನಭ ಮುಚ್ಚಿದ ಚರಣ 

ಹೆಡೆಯನೊಡೆದು ಕುಣಿದಾಡಿದ ಚರಣ 

ಶಿಲೆಯ ಮೆಟ್ಟಿ ವರ ಕೊಟ್ಟಂಥ ಚರಣ 

ಭಾಗೀರಥಿಯ ಭುವಿಗಿಳಿಸಿದ ಚರಣ 


ಕಪಟ ಶಕಟನ ಮುರಿದಿಟ್ಟಂಥ ಚರಣ 

ರಥಮೆಟ್ಟಿ ಅತಿರಥನ ಪೊರೆದಂಥ ಚರಣ 

ಸಖಿಯರೊಡೆ ಸರಸದಲಿ ವಿಹರಿಸಿದ ಚರಣ 

ರಘುನಂದನನ ಪೊರೆವ ರನ್ನದ ಚರಣ 


ಚಣಕಾಲ ನೆನೆಯಿರಿ  ಶ್ರೀಹರಿಯ ಚರಣ 

ಚಿರಕಾಲ ಪಡೆಯಿರಿ ಸಿರಿಪತಿಯ ಕರುಣ






ಶ್ರೀ ಪುರಂದರದಾಸರ ಆರಾಧನೆಯಂದು ದಾಸವರೇಣ್ಯರ  ಕ್ಷಮೆಕೋರುತ್ತಾ.........  



ನರಜನ್ಮ ಬಂದಾಗ ನಾಲಿಗೆ ಇರುವಾಗ 

ಕೃಷ್ಣಾ ಎನಬಾರದೇ 

ಸರಸಿಜಾತನಪಿತನ ನೆನೆಯುತ್ತಲೊಮ್ಮೊಮ್ಮೆ 

ಕೃಷ್ಣಾ ಎನಬಾರದೇ


ವಾಟ್ಸಾಪ್ ಸಂದೇಶ ನೋಡಿ ಮುಂದೂಡುತ್ತ 

ಕೃಷ್ಣಾ ಎನಬಾರದೇ

ಫೇಸ್ಬುಕ್ ಗೀಸ್ಬುಕ್ ನಲ್ಲಿ ಮೆಚ್ಚುತ್ತ ಚುಚ್ಚುತ್ತ 

ಕೃಷ್ಣಾ ಎನಬಾರದೇ


ಕೀಬೋರ್ಡಿನಿಂದ ಕೈಬೆರಳುಗಳ  ಬದಿಗಿರಿಸಿ 

ಕೃಷ್ಣಾ ಎನಬಾರದೇ

ಮೇಲೆದ್ದು ಸೊಂಟವನು ನೆಟ್ಟಗಾಗಿಸುತ್ತಲೊಮ್ಮೆ  

ಕೃಷ್ಣಾ ಎನಬಾರದೇ


ಸ್ವಿಗ್ಗಿಯವ ತಂದಿಟ್ಟ ಹುಗ್ಗಿಯನು ನುಂಗುತ್ತ 

ಕೃಷ್ಣಾ ಎನಬಾರದೇ

ರಘುನಂದನನ ಪೊರೆವ ಅಘಭಂಜಕನ ನೆನೆದು 

ಕೃಷ್ಣಾ ಎನಬಾರದೇ


Sunday, 4 April 2021

ರವಿ ನಾಚಿದ





ತನ್ನ ದಿಟ್ಟಿಸುವ 

ಚಂದಿರವದನದ  

ಚಲುವೆಯನು ಕಂಡು 

ರವಿ ನಾಚಿದ 

ಉರಿಮೋರೆ ರಂಗೇರಿ  

ಕದಪು ಕೆಂಪೇರಿ   

ಮೋಡಗಳ ಮರೆಸೇರಿ  

ರವಿ ಕಡಲಿಗಿಳಿದ !



  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...