Saturday, 25 April 2020

ನಮ್ಮ ಮನೆಯಂಗಳದ ಹೂವು

  




ಬೇಸಗೆಯ ದಿನಗಳಲ್ಲಿ 
ನಮ್ಮ ಮನೆಯಂಗಳದಲ್ಲಿ
ಹೂಗಳು ಸುರಿಯುತ್ತವೆ 
ಮಲ್ಲಿಗೆಯ ಬಳ್ಳಿಯಲ್ಲಿ

ನೋಡಿ ಪ್ರತಿಮುಂಜಾನೆ,
ಸಂತೋಷಪಡುತ್ತೇನೆ 
ಸುಗಂಧ ಸವಿಯುತ್ತೇನೆ 
ಚಿತ್ರ ತೆಗೆಯುತ್ತೇನೆ 
ಕಂಡಕಂಡವರ 
ಮುಂದಿರಿಸುತ್ತೇನೆ
ಸಂಭ್ರಮದಿಂದ

ನೋಡಿದವರು 
ನಸುನಗುತ್ತಾರೆ 
ಚಂದ ಎನ್ನುತ್ತಾರೆ 
ಸುಮ್ಮನಾಗುತ್ತಾರೆ 

ಅದೇ ಗಿಡ 
ಅದೇ ಹೂವು
ಹೊಸತೇನದರಲ್ಲಿ 
ಸಾಕಾಗದೆ ನಿಮಗೆ ? 
ಕೇಳಿಯೇ ಬಿಟ್ಟರು, 
ನನ್ನ ‘ಸಂಭ್ರಮ’ ಸಹಿಸಿ 
ಸಾಕಾದವರೊಬ್ಬರು 

ನಮ್ಮ ಅಂಗಳದ ಹೂವಲ್ಲವೇ 
ಮೊನ್ನೆ ನಾವು ಕಳಿಸಿದ್ದು 
ಮತ್ತೊಂದು ಅಂಗಳವ 
ಬೆಳಗಿಸುತ್ತ ಬಾಳಲೆಂದು ? 

ಕಂಡಾಗಲೆಲ್ಲ ನಮ್ಮಹೂವ
ತುಂಬಿ ಬರದೇ ಭಾವ ?
ಎಂದಾದರೂ ಸಾಕೆಂದಿತೇ
ಈ ಜೀವ ?


ರಘುನಂದನ - ಗೋವಾ 


( ನಮ್ಮ ಮಲ್ಲಿಗೆ ಬಳ್ಳಿ ನಾನು ನೆಟ್ಟದ್ದಲ್ಲ. ಮತ್ಯಾರೋ ತಂದು ನೆಟ್ಟದ್ದು. ಅದನ್ನು ಕಂಡಾಗಲೆಲ್ಲಾ ನನಗೆ
ನಿಸಾರ ಅಹಮದ್ದರ  ‘ಗೃಹಪ್ರವೇಶದ ಉಡುಗೊರೆ’ ಕವನ ನೆನಪಾಗುತ್ತದೆ. ಅದನ್ನು ಓದಲು 
ಬಯಸುವವರು ಇಲ್ಲಿ ಓದಬಹುದು.  https://maatu-kate.blogspot.com/ )

Tuesday, 21 April 2020

ಕರೋನ ಕವಿತೆ ?


ಸ್ನೇಹಿತರ ಮಧ್ಯೆ ಹರಟೆ ನಡೆದಿತ್ತು, 
ಅಂತರ ಕಾಯ್ದುಕೊಂಡು 
ಮೊಬೈಲ್ ಮೂಲಕ
ತಿಂಗಳಿಂದ ಕೆಲಸವಿಲ್ಲದೆ  ಕುಳಿತೆವಲ್ಲ 

ಯಾರೇನು ಮಾಡಿದಿರಯ್ಯಾ? 
ಮನೆಯಲ್ಲಿ ಕೂತು,  

ಚಿತ್ರ ಬರೆಯುತ್ತೇನೆ, ಒಬ್ಬನೆಂದ. 
ನಮ್ಮ ಗುಂಪಿನ ಕಲಾವಿದ 

“ಚಿತ್ರ ಬರೆಯುತ್ತೇನೆ, 
ಮನದ ಭಿತ್ತಿಯಮೇಲೆ,
ಭಾವನೆಯ ಬಣ್ಣಹಚ್ಚಿ, 
ಕಲ್ಪನೆಯ ಕುಂಚದಿಂದ”   
ಎರಡನೆಯವ, ಕವಿಯಂತೆ 
ನಮಗೆ ತಿಳಿಯದು ಅವನ ಮಾತು

ಹಾಡಲು ಕಲಿಯುತ್ತೇನಯ್ಯ
ಮೂರನೆಯವನೆಂದ

ಕಲಿಯಲಡ್ಡಿಯಿಲ್ಲ, ಕಲಿತದ್ದ ಕೇಳಿಸಿ  
ನಮ್ಮ ಕೊಲಬೇಡ - ಕುಹಕಿಯೊಬ್ಬನಿಂದ   

ಅಡಿಗೆ ಮಾಡಿದೆನೆಯ್ಯಾ ! ಹೆಡಿಗೆ ತುಂಬಾ 
ನಾಲ್ಕನೆಯವ 
ಉಂಡವರು ಬದುಕಿದ್ದಾರೇನಯ್ಯ? 
ಐದನೆಯ ಮಿತ್ರ. 

ಹೀಗೇ  ನಡೆದಿದ್ದಾಗ ಒಬ್ಬನೆಂದ,

ನಿಮಗೆ ಆಶ್ಚರ್ಯ ವಾದೀತೇನೋ, 
ಹೊಲಿಗೆ ಕಲಿಯುತ್ತಿದ್ದೇನೆ 
ಒಮ್ಮೊಮ್ಮೆ ನೆಟ್ಟಗೆ ಬರುತ್ತದೆ,  
ಒಮ್ಮೊಮ್ಮೆ ಸೊಟ್ಟಗಾಗಿ
ಕೆಟ್ಟೇ ಹೋಗುತ್ತದೆ.

ನಾನೂ  ಅಷ್ಟೇ, ಅಕ್ಷರ ಜೋಡಿಸಿ 
ಹೊಲಿಯಲು ಕಲಿಯುತ್ತಿದ್ದೇನೆ 
ಅರ್ಥ ಬರುವಂತೆ
ಒಮ್ಮೊಮ್ಮೆ ನೆಟ್ಟಗೆ ಬರುತ್ತದೆ 
ಒಮ್ಮೊಮ್ಮೆ ಕೆಟ್ಟೇ ಹೋಗುತ್ತದೆ ! 

Tuesday, 7 April 2020

ಗೋಪೀ ಹಕ್ಕಿ

ದೇಶಕ್ಕೆ ಬೀಗ ಬಿಗಿದಿದ್ದರೂ, ಮುಂಜಾನೆ ಬೆಳಕಾಗುವ ಮುಂಚೆ ಬೀಗ ಸಡಿಲಿಸಿ  ಅರ್ಧತಾಸು ವಾಯುಸಂಚಾರ
ಮಾಡಿಬಿಡುತ್ತೇನೆ. ನಮ್ಮ ಮನೆಯ ಸಮೀಪದಲ್ಲಿರುವ ಒಂದು ಸಣ್ಣ ತೊರೆಯ ಸುತ್ತಮುತ್ತ ಬೆಳೆದುಕೊಂಡು,
ಉಳಿದುಕೊಂಡಿರುವ ಮರಗಳಲ್ಲೊಂದರಲ್ಲಿ ‘ಮಲಬಾರ ವಿಸಿಲಿಂಗ್ ತ್ರಷ್’ ಎಂದು ಕರೆಸಿಕೊಳ್ಳುವ ಈ ಹಕ್ಕಿಯ
ಗಾನ ವರುಷಕ್ಕೊಮ್ಮೆ, ಕೆಲವುದಿನಗಳ ಕಾಲ, ತಪ್ಪದೆ ಕೇಳಿಬರುತ್ತದೆ. 
ನಾನು ಒಮ್ಮೆಯೂ ಆ ಜಾಗದಲ್ಲಿ ಅದನ್ನು ಕಂಡಿಲ್ಲ. ಆದರೆ ವರುಷಕ್ಕೊಮ್ಮೆ ಆ ಹಕ್ಕಿ ಕೂಗಿ, ತಾನಿನ್ನೂ
ಬದುಕಿದ್ದೇನೆಂದು ತಿಳಿಸಿದರೆ ನನ್ನ ಮನಸ್ಸಿಗೆ ಅದೇನೋ ಸಮಾಧಾನ. ಈ ವರುಷ ಸಮಯ ಮೀರಿದರೂ
ಅದರ ಕರೆ ಕೇಳಿಬರದೆ ಕೊಂಚ ಬೇಸರವಾಗಿತ್ತು. ಈ ಮುಂಜಾನೆ ಅದನ್ನು  ಕೇಳಿ ಬಹಳ ಸಂತೋಷವಾಯಿತು.
ಆ ಸಮಯದಲ್ಲಿ ಹೊಳೆದ ಕೆಲವು ಸಾಲುಗಳನ್ನು ಬೆಳಸಿ ಇಲ್ಲಿ ತಂದಿದ್ದೇನೆ. 
ಮುಂಜಾನೆಯ ನಿಶ್ಯಬ್ಧ ವಾತಾವರಣದಲ್ಲಿ, ಅದೆಲ್ಲೋ ಕೊಂಚ ದೂರದಲ್ಲಿ, ಗಿಡ ಮರಗಳ ಮಧ್ಯದಿಂದ
ತೂರಿಬರುವ ಆ ಗಾನ ಮನಸ್ಸಿಗೆ ಆಹ್ಲಾದಕಾರಕವೆನಿಸುತ್ತದೆ.
ಹಕ್ಕಿಯನ್ನು  ಕಂಡಿಲ್ಲದವರ ಅನುಕೂಲಕ್ಕೆಂದು ಅದರ ಚಿತ್ರವನ್ನು ಇಲ್ಲಿ ತಂದಿರಿಸಿದ್ದೇನೆ. 
ಗಾನ, ಚಿತ್ರ, ಅಂತರಜಾಲದಿಂದ ಪಡೆದುಕೊಂಡದ್ದು. 
ಸಾಲುಗಳು ನಾನು ಓದಿರುವ, ಮತ್ತು  ಆ ಮೂಲಕ ನನ್ನ ಮನದಲ್ಲಿ ಹೊಕ್ಕು ಹುದುಗಿರುವ ಅದೆಷ್ಟೋ
ಮಹಾನುಭಾವರ ಬರಹಗಳ ಪ್ರಭಾವ. 
ಬೆರಳಚ್ಚು ಮಾಡಿದವ ನಾನೆಂದು ಧೈರ್ಯವಾಗಿ ಹೇಳಬಲ್ಲೆ !





ಈ ಹಕ್ಕಿ ಕೂಗುವುದ ಕೇಳಿದೆ 
ಅರೆಗತ್ತಲಿನ ಬೆಳಗಿನಲ್ಲಿಂದು.   
ಅದೇನು ವಿಶೇಷ ಎನ್ನುವಿರೇನೋ ?
ವಿಶೇಷ ಹೀಗಿದೆ ನೋಡಿ. 
ಇದು ದಿನವಿಡೀ ಕೂಗುವುದಿಲ್ಲ,
ತ್ರ. 
ವರುಷವಿಡೀ  ಕೂಗುವುದಿಲ್ಲ,
ವಸಂತದಲ್ಲಿ ಮಾತ್ರ.
ಮತ್ತೆ, ನಾನದನು ಕಂಡಿಲ್ಲ
ಆಲಿಸಿದ್ದೇನೆ ಮಾತ್ರ !  

ನಿಜವೆಂದರೆ, ಇದು ಕೂಗುವುದಿಲ್ಲ,
ಕೋಗಿಲೆಯಂತೆ,
ಪದೇ ಪದೇ ಒಂದೇರಾಗದಲ್ಲಿ.  
ಈ ಹಕ್ಕಿ ಹಾಡುತ್ತದೆ,
ಸುಮಧುರವಾಗಿ, 
ಸರಾಗವಾಗಿ, ಸ್ಪಷ್ಟವಾಗಿ,
ಸಂಗೀತದಂತೆ !

ಮತ್ತಿದು 
ಎಲ್ಲೆಂದರಲ್ಲಿ ಅಲೆಯುತ್ತಾ 
ವಲಸೆಹೋಗುವುದಿಲ್ಲ.  
ವರುಷ ವರುಷಗಳ ಕಾಲ
ಇರುತ್ತದೆ ಇರುವೆಡೆಯೆಲ್ಲೇ.  
ಯಾರರಿವಿಗೂ ಬಾರದಂತೆ 
ಹಾರಾಡುತ್ತ, ಅಲ್ಲೇ 
ಸುತ್ತಮುತ್ತ.  

ವೈಶಾಖದ ಬಿಸಿಲು 
ವರ್ಷಕಾಲದ  ಮಳೆಯಂತೆ 
ವಸಂತದ ಈ ಗಾನ  
ಋತುಗಳ ತಾನ 
ಸರಿಯುಂಟೆಂಬ  ಭಾವನೆ 
ನೀಡುತ್ತದೆ ನನಗೆ.  
ಅದರಿಂದಲೇ, 
ಕಳವಳವಾಗಿತ್ತು ಮನಸಿಗೆ  
ಗಾನಕೇಳದೆ  ಈವರೆಗೆ.


ಹಾಡು ಕೇಳಿಬಂತು
ಇಂದು ಮುಂಜಾನೆ  
ಪ್ರತಿ ವಸಂತದಂತೆ 
ತಾನ  ತಪ್ಪದಂತೆ
ಕಿವಿಗಿಂಪೆನಿಸುವಂತೆ 
ಮನಹಗುರವಾಗುವಂತೆ  
ಎರಡು ಸಾಲು ಮೂಡುವಂತೆ !

ಬರೆದೆ ನೋಡಿ ಇಷ್ಟೆಲ್ಲಾ, 
ಆ ಹಕ್ಕಿಯ ಹೆಸರೇ 
ನನಗೆ ತಿಳಿದಿರಲಿಲ್ಲಾ !
ಅದು ಗೊತ್ತಾದದ್ದು ಇದೀಗ,  
ಗೂಗಲಿಸಿ ನೋಡಿದಾಗ !  
ಹೆಸರೂ ಸುಂದರ,
ಗಾನದಂತೆಯೇ ಮಧುರ !
ಗೋಪೀಹಕ್ಕಿ ಯಂತೆ !
ಕೃಷ್ಣನ ಕೊಳಲಿನ
ನೆನಪೇ ?!

Tuesday, 24 March 2020

ಬೀಗ ಬಿದ್ದಿದ್ದ ಯುಗಾದಿ




ಮುಂಜಾನೆಯೆದ್ದು ಹೊರಬಂದಾಗ 

ದೇಶಕ್ಕೆ ಬೀಗ ಬಿದ್ದಿತ್ತು 
ಸುತ್ತಲೂ ಕತ್ತಲಿತ್ತು 
ಮನದಲ್ಲಿ ಅಂಜಿಕೆಯಿತ್ತು 

ಆದರೆ  

ತಂಗಾಳಿ  ಬೀಸುತ್ತಿತ್ತು 
ಕೋಗಿಲೆ  ಕೂಗುತ್ತಿತ್ತು 
ಗಿಡದಲ್ಲಿ ಹೂವು ಅರಳಿತ್ತು 

ಕೆಲಸಮಯದಲ್ಲೇ 
ಕಿರಣಮೂಡುವುದೆನ್ನಿಸಿ 
ಕಳವಳ ಕಡಿಮೆಯಾಯಿತು 

ಮರಳಿ ಮರಳಿ ಬರುವ ಯುಗಾದಿ 
ತಮಗೆಲ್ಲಾ  ಶುಭ ಕೊಂಡುಬರಲಿ 


ಸೂರ್ಯ



ಬೆಳಗ್ಗೆ ಉದಯಕಾಲದ ಸಮಯಕ್ಕೆ ನಮ್ಮ ಬಾಲ್ಕನಿಗೆ ಬಂದರೆ, ನಮ್ಮ ಎದುರಿನಲ್ಲಿ ಇರುವ ಮರಗಳ
ಮರೆಯಿಂದ ನಮಗೆ ಸೂರ್ಯೋದಯ ಕಾಣಬರುವುದು ಹೀಗೆ.  ಸೂರ್ಯ ಉದಯಿಸುತ್ತಾನೆ ಪ್ರತಿದಿನ.
ಭಾವನೆಗಳು ಉದಯಿಸಿ ಸಾಲುಗಳು ಮೂಡುತ್ತವೆ ಒಂದೊಂದುದಿನ ! 
ವೈರಸ್ ಕಾರ್ಮೋಡದ ಮಧ್ಯದಿಂದ ಸುದಿನಗಳ ಆಶೆಯ ರವಿಕಿರಣಗಳು ತೂರಿಬರಲೆಂದು ಆಶಿಸುತ್ತಾ
ಇಂದಿನ ಎರಡುಸಾಲುಗಳನ್ನು ತಮ್ಮ ಮುಂದಿಟ್ಟಿದ್ದೇನೆ. 








ಅದೇ ದಿಕ್ಕು 
ಅದೇ ಜಾಗ 
ಅದೇ ಸಮಯ 
ಆಕಾರ, ಬಣ್ಣ. 


ಕಾಣುತ್ತೇನೆ ದಿನದಿನ 
ಇವನು ಹುಟ್ಟುವುದನ್ನ. 


ಆದರಿಲ್ಲಿ ನೋಡಿ,
ಇವನ 
ಹೆಚ್ಚುಗಾರಿಕೆಯನ್ನ,


ಶತ ಶತಮಾನ 
ಸಾವಿರಾರು ಜನ 
ಬರೆದು ಬರೆದು 
ಸುರಿದರೂ 
ತೀರದು ಇವನ 

ಗುಣಗಾನ ! 



Monday, 16 March 2020

ಕಂಪು ಸೂಸಿ ಕುಳಿತುದೇಕೆ ?


ಬೆಂಗಳೂರಿನ ಜಯನಗರದ ಮಾರುಕಟ್ಟೆಯಲ್ಲಿ ಸಂಜೆಯ ಸಮಯ ಮಾರಾಟಕಿಟ್ಟಿದ್ದ
ಹೂಗಳ ಮನೋಹರವಾದ ನೋಟ ಮನಸ್ಸಿಗೆ ಬಹಳ ಮುದವೆನ್ನಿಸಿತು.
ಆಗ ಮನದಲ್ಲಿ ಮೂಡಿದ ಕೆಲವು ಸಾಲುಗಳು ಒಂದುವಾರದ ತಿಣುಕಾಟದ
ನಂತರ ಒಂದು ರೂಪ ಪಡೆದಿವೆ. 






ಮೊಗ್ಗು ಬಿರಿದ ಮಲ್ಲಿಗೆ
ಸಂಪಿಗೆ ಶೇವಂತಿಗೆ
ಕನಕಾಂಬರ ಕೆಂಗುಲಾಬಿ    
ಕಂಗೊಳಿಸುವ ಮಾಲೆಯಾಗಿ 
ಸೊಂಪಾಗಿ ಸೊಗಯಿಸುತ್ತ  
ಕಂಪು ಸೂಸಿ ಕುಳಿತುದೇಕೆ ?


ಹರಿಯ ಕೊರಳ ಸುತ್ತ ಸುಳಿದು
ಒಲುಮೆಯಿಂದ  ಪಾದಕಿಳಿದು 
ನಲುಮೆಯಿಂದ ನಮಿಸಬೇಕೇ ? 


Monday, 16 December 2019

ಹಾದಿ ಬದಿಯ ಹೂವು - ಮಳೆರಾಯ

ಹಾದಿ ಬದಿಯ ಹೂವು 

ಅಗೆಯಲಿಲ್ಲ 
ಯಾರೂ 
ಬೀಜ ಒಗೆಯಲಿಲ್ಲ 
ಕುಣಿತೋಡಲಿಲ್ಲ 
ಸುತ್ತ 
ನೀರುಣಿಸಲಿಲ್ಲ 

ಬೆಳೆದು ಅರಳಿತು 
ತನ್ನಂತೆ ತಾನೇ 
ನನ್ನಂಥ 
ಕಾಣುವ ಕಂಗಳು  
ಚಣಕಾಲ 
ತಣಿಯಲೆಂದು 


ಮಳೆರಾಯ 


ಇಂದೇಕೋ ಬೇಗನೆ 
ಮುಗಿಯಿತು ನಿದ್ದೆ.
ಎದ್ದೆ.
ಹೊರಬಿದ್ದೆ.

ಸುತ್ತಲೂ 
ಇನ್ನೂ ಕತ್ತಲು.

ವಾಯು ಸಂಚಾರದ 
ಜತೆಗಾರರು 
ಯಾರೂ ಇಲ್ಲ. 
ಆದರೂ,
ಪರವಾಗಿಲ್ಲ. 
ನಡೆದೆ.

ಕೆಲವೇ ನಿಮಿಷದಲ್ಲಿ,
ಕಣ್ಣಿಗೆ ಬೀಳುವ ಮುಂಚೆ 
ಮೈಮೇಲೆಯೇ ಬಿದ್ದ.
ಅನೀರಿಕ್ಷಿತವಾಗಿ 
ಬಂದ 
ಈ ರಾಯ.
ಮಳೆರಾಯ !!


  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...