Wednesday, 9 February 2022

ಶ್ರೀಮದಾನಂದತೀರ್ಥರ ಶ್ರೀಮಚ್ಚರಣಗಳಲ್ಲಿ

ಶ್ರೀ ಮಧ್ವಾಂತರ್ಗತ ಶ್ರೀ ಲಕ್ಷ್ಮಿನಾರಾಯಣರ ಪ್ರೇರಣೆಯಿಂದ, ಅವರ ಸೇವೆಯೆಂದು,

ಇಂದು ಮಧ್ವನವಮಿಯ ಶುಭ ಸಂಧರ್ಭದಲ್ಲಿ  ಶ್ರೀಮದಾನಂದತೀರ್ಥರ 

ಶ್ರೀಮಚ್ಚರಣಗಳಲ್ಲಿ ಸಮರ್ಪಣೆ 


ತ್ರೇತೆಯಲಿ ಹನುಮ ನೀ ಶ್ರೀರಾಮನ ಬಂಟ 

ದ್ವಾಪರದಲಿ ಭೀಮ, ನಮ್ಮ ಕೃಷ್ಣನ ನೆಂಟ 

ಕಲಿಯುಗದಿ ಅವತರಿಸಿ ಮಧ್ವರಾಯನೆಂದು 

ಉಡುಪಿಯಲಿ ನಿಲ್ಲಿಸಿದೆ ಕೃಷ್ಣನೆಳೆತಂದು !


ಪಾಕಶಾಸ್ತ್ರ ಪ್ರವೀಣ ದ್ವಾಪರದ ಭೀಮ 

ಶಾಸ್ತ್ರಪಾಕವಿಳಿಸಿದನಮ್ಮ ಮಧ್ವ ಮಹಿಮ 

ನೀ ಬರೆದ ಭಾಷ್ಯ, ತಾತ್ಪರ್ಯ, ಸಾರ 

ಹರಿಭಕ್ತಿ, ತಾರತಮ್ಯ, ಬೇಧ ನಮಗಾಧಾರ 


ತಂದೆ ನೀ, ತಾಯಿ ನೀ, ಗುರು ಭಾತೃ ನೀನು 

ಪ್ರಾಣ, ನೀನಿರುವವರೆಗೆ ಆಡುವೆನು ನಾನು 

ಕೃಪೆಮಾಡು ಹರಿಯಲ್ಲಿ, ನಿನ್ನಲ್ಲಿ, ಭಕ್ತಿ 

ನಿನ್ನ ಪಾದಧೂಳಿಯಿಂದಲೇ ನಮಗೆ ಮುಕ್ತಿ.   


ಶಾಸ್ತ್ರ ಪ್ರಕಾರವರಿಯೆ ಪಾಮರನು ನಾನು 

ಸಂಸಾರ ಕೂಪದೊಳು ಈಜುತಿಹ ಮೀನು 

ನನ್ನ ಮನ, ಒಳ ಹೊರಗ, ತಿಳಿದಿಹನು ನೀನು 

ಸ್ವಾಮಿ, ನೀ ಸತತ ಪೊರೆ ಈ ರಘುನಂದನನು 


Wednesday, 19 January 2022

ಶ್ರೀಹರಿಯ ಚರಣ + ಕೃಷ್ಣಾ ಎನಬಾರದೇ

ಚಣಕಾಲ ನೆನೆಯಿರಿ  ಶ್ರೀಹರಿಯ ಚರಣ 

ಚಿರಕಾಲ ಪಡೆಯಿರಿ ಸಿರಿಪತಿಯ ಕರುಣ

  

ಇಳೆಯನಳೆದು ನಭ ಮುಚ್ಚಿದ ಚರಣ 

ಹೆಡೆಯನೊಡೆದು ಕುಣಿದಾಡಿದ ಚರಣ 

ಶಿಲೆಯ ಮೆಟ್ಟಿ ವರ ಕೊಟ್ಟಂಥ ಚರಣ 

ಭಾಗೀರಥಿಯ ಭುವಿಗಿಳಿಸಿದ ಚರಣ 


ಕಪಟ ಶಕಟನ ಮುರಿದಿಟ್ಟಂಥ ಚರಣ 

ರಥಮೆಟ್ಟಿ ಅತಿರಥನ ಪೊರೆದಂಥ ಚರಣ 

ಸಖಿಯರೊಡೆ ಸರಸದಲಿ ವಿಹರಿಸಿದ ಚರಣ 

ರಘುನಂದನನ ಪೊರೆವ ರನ್ನದ ಚರಣ 


ಚಣಕಾಲ ನೆನೆಯಿರಿ  ಶ್ರೀಹರಿಯ ಚರಣ 

ಚಿರಕಾಲ ಪಡೆಯಿರಿ ಸಿರಿಪತಿಯ ಕರುಣ






ಶ್ರೀ ಪುರಂದರದಾಸರ ಆರಾಧನೆಯಂದು ದಾಸವರೇಣ್ಯರ  ಕ್ಷಮೆಕೋರುತ್ತಾ.........  



ನರಜನ್ಮ ಬಂದಾಗ ನಾಲಿಗೆ ಇರುವಾಗ 

ಕೃಷ್ಣಾ ಎನಬಾರದೇ 

ಸರಸಿಜಾತನಪಿತನ ನೆನೆಯುತ್ತಲೊಮ್ಮೊಮ್ಮೆ 

ಕೃಷ್ಣಾ ಎನಬಾರದೇ


ವಾಟ್ಸಾಪ್ ಸಂದೇಶ ನೋಡಿ ಮುಂದೂಡುತ್ತ 

ಕೃಷ್ಣಾ ಎನಬಾರದೇ

ಫೇಸ್ಬುಕ್ ಗೀಸ್ಬುಕ್ ನಲ್ಲಿ ಮೆಚ್ಚುತ್ತ ಚುಚ್ಚುತ್ತ 

ಕೃಷ್ಣಾ ಎನಬಾರದೇ


ಕೀಬೋರ್ಡಿನಿಂದ ಕೈಬೆರಳುಗಳ  ಬದಿಗಿರಿಸಿ 

ಕೃಷ್ಣಾ ಎನಬಾರದೇ

ಮೇಲೆದ್ದು ಸೊಂಟವನು ನೆಟ್ಟಗಾಗಿಸುತ್ತಲೊಮ್ಮೆ  

ಕೃಷ್ಣಾ ಎನಬಾರದೇ


ಸ್ವಿಗ್ಗಿಯವ ತಂದಿಟ್ಟ ಹುಗ್ಗಿಯನು ನುಂಗುತ್ತ 

ಕೃಷ್ಣಾ ಎನಬಾರದೇ

ರಘುನಂದನನ ಪೊರೆವ ಅಘಭಂಜಕನ ನೆನೆದು 

ಕೃಷ್ಣಾ ಎನಬಾರದೇ


Sunday, 4 April 2021

ರವಿ ನಾಚಿದ





ತನ್ನ ದಿಟ್ಟಿಸುವ 

ಚಂದಿರವದನದ  

ಚಲುವೆಯನು ಕಂಡು 

ರವಿ ನಾಚಿದ 

ಉರಿಮೋರೆ ರಂಗೇರಿ  

ಕದಪು ಕೆಂಪೇರಿ   

ಮೋಡಗಳ ಮರೆಸೇರಿ  

ರವಿ ಕಡಲಿಗಿಳಿದ !



Wednesday, 6 January 2021

ಅವನ ಚಿತ್ತ ! - ಇಂದು ಮುಂಜಾನೆಯ ಮಳೆ

ಅವನ ಚಿತ್ತ  ! 


ರವಿ, ಶಶಿಯರ 

ಸೃಷ್ಟಿಸಿದಾತ  

ಉದಯಾಸ್ತಗಳ 

ನೇಮಿಸಿದಾತ 

ನಮಗೆ  ಕಂಗಳನಿತ್ತ

ನೋಡಿ ನಲಿದಾಡುವ 

ಮನವನಿತ್ತ.  


ಎಳೆ ಬಿಸಿಲಿನಲಿ  

ಹಿತಗೊಳುವ  

ತಂಗಾಳಿಯಲಿ 

ಸುಖಪಡುವ 

ಮೊದಲಹನಿ ಬಿದ್ದ 

ಮಣ್ಣಿನಿಂದೆದ್ದ 

ಮೆಲುವಾಸನೆಯ  

ಮೂಸಿನಲಿವ

ಇಂದ್ರಿಯಗಳನಿತ್ತ 

ಅವನ ಚಿತ್ತ ! 


ಸುಡುವ ಬಿಸಿಲನಿತ್ತ 

ಹಸಿವ ಬರಗಾಲವನಿತ್ತ 

ಸುರಿವ ಮಳೆಯಿತ್ತ  

ಸೆಳೆವ ಪ್ರವಾಹವನಿತ್ತ

ಕಷ್ಟ ಕಾರ್ಪಣ್ಯವಿತ್ತ  

ರೋಗ ರುಜಿನವನಿತ್ತ 

ನೆಮ್ಮದಿಯ ಕಿತ್ತ 

ಅವನ ಚಿತ್ತ !


ಬಂದ ಧರೆಯತ್ತ 

ಧನುವ ಧರೆಗಿಟ್ಟವನತ್ತ  

ಸಖನ ಶಿರ ನೇವರಿಸುತ್ತ 

ಉಪದೇಶವ ನಮಗಿತ್ತ 

ನೋಡುವಿಯೇಕೆ ಅತ್ತಿತ್ತ 

ಎಲ್ಲವೂ ನನ ಚಿತ್ತ 

ನಡೆ ನಾ ನಡೆಸಿದತ್ತ 

ಸುಖದುಃಖದಲಿರಿಸಿ

ಸಮಚಿತ್ತ.   



ಇಂದು ಮುಂಜಾನೆಯ ಮಳೆ 


ಆಕಾಶಕ್ಕೆಲ್ಲಾ ಮೋಡಾಮುಚ್ಚಿ 

ಚಂದ್ರನ್ ಮೋರೆ ಮರೇ ಮಾಚಿ 

ಕತ್ಲಾಗ್ ಕುಂತ್ಕೊಂಡ್ ಈ ನಮ್ ದೇವ್ರು 

ತಟ್ಟಾ ತಟ್ಟಾ ಮಳೆ ಬುಡ್ತೌನೆ

ಮುನಿಯ ಯೆಂಡ ಬುಡುವಂಗೇನೆ !


(ಶ್ರೀ ರಾಜರತ್ನಂ ಅವರ ಕ್ಷಮೆಕೋರಿ)


ರಘುನಂದನ

Saturday, 21 November 2020

ಹರಿಯಪಾದಸೇರಿತು ದಾರ !

ಕಟ್ಟಿದ್ದಷ್ಟೇ ನನ್ನ 

ಕಾರ್ಯಭಾರ.  

ಅದರ ಹಣೆಯಲ್ಲಿತ್ತು, 

ಹಾರವಾಗಿ 

ಹರಿಯಪಾದಸೇರಿತು

ದಾರ !

Saturday, 14 November 2020

ಚಿತ್ರ - ಚುಟುಕ - ಬೇಲಿ ಬೆಳೆಯಿತು ! And ತೆಂಗು - ರಂಗು

ನೆಟ್ಟಗಿಡ ನಳನಳಿಸಿ 

ದಟ್ಟವಾಗಿ ಬೆಳೆಯಲೆಂದು 

ಘಟ್ಟಿಯಾದ ಬೇಲಿಯೊಂದ 

ಕಟ್ಟಿದೆವು ಸುತ್ತಲೂ 


ಗಿಡ ಉಳಿಯಲಿಲ್ಲ  

ಬಿಡಿ, ಪರವಾಗಿಲ್ಲ  

ಬೇಲಿಯಾದರೂ 

ಬೆಳೆಯಿತಲ್ಲ ! 






ತೆಂಗು - ರಂಗು 


ಅದೇ ಸಂಜೆ 

ಅದೇ ಸೂರ್ಯ 

ಅದೇ ತೆಂಗು 

ಅದೇ ರಂಗು 

ಅದಕೆ 

ಪ್ರಕೃತಿಯಿತ್ತ ಮೆರಗು 

ಎನಗೆ 

ನಿತ್ಯದ ಬೆರಗು !


Saturday, 7 November 2020

ಅವತರಿಸಿದೆ ಶರತ್ಕಾಲ.

ಶರತ್ಕಾಲ ಕಾಲಿಟ್ಟಂತೆ, ನಾನು ನಿತ್ಯ ಕಾಣುತ್ತಿರುವ  ಚಿತ್ರ. 

ಮಳೆಯಲ್ಲಿ ತೊಳೆದ ಸಸ್ಯರಾಶಿ ಹಚ್ಚಗೆ ನಳನಳಿಸುತ್ತಾ ತೆಳ್ಳನೆಯ ಮಂಜಿನ ಆವರಣದೊಳಗೆ ಮುಸುಗಿದೆ.

ಮಳೆಯಲ್ಲಿ ಮುದುಡಿದ್ದ ಪಾರಿಜಾತದ ಮೊಗ್ಗು, ಈಗ ಬಿರಿದು ಕಂಪು ಹರಡಿದೆ. ಬಾನಲ್ಲಿ ಬೆಳ್ಳಕ್ಕಿಗಳು ಗುಂಪು

ಗುಂಪಾಗಿ ಹಾರುತ್ತಿವೆ. ಮುಂಜಾನೆಯ ತಂಪಿನಲಿ ಹವ್ಯಾಸಿ ಕಲಾವಿದನೊಬ್ಬ ರಸ್ತೆಯ ಬದಿ ಕುಳಿತು ಕೊಳಲ

ವಾದನವನ್ನು  ಕರಗತವಾಗಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾನೆ. ಮುಂಜಾನೆಯ ಅರೆಗತ್ತಲ ಈ

ಪರಿಸರದಲ್ಲಿ ಮನವರಳಿ ನಲಿಯುತ್ತದೆ.   



ಹಚ್ಚ ಹಸುರು ಸಸ್ಯರಾಶಿ 

ಧರೆಯುಟ್ಟ ಉಡುಗೆ.  

ಆವರಿಸಿದೆ ತೆಳು ಮಂಜಿನ 

ಬಿಳಿ ಮೇಲುದೆಯ ತೊಡುಗೆ  


ತಂಪೆಲರಲಿ ಸೂಸುತ್ತಿದೆ   

ಪಾರಿಜಾತದ ಕಂಪು 

ತನ್ನೊಟ್ಟಿಗೆ ಕರೆತಂದಿದೆ   

ಕೊಳಲದನಿ ಇಂಪು 


ಆಗಸದಿ  ಹಾರುತಿದೆ  

ಬಿಳಿ ಬೆಳ್ಳಕ್ಕಿ ಮಾಲೆ 

ಇಟ್ಟಂತೆ  ಮುಂಜಾನೆ  

ಮುಗಿಲಲ್ಲಿ ರಂಗೋಲೆ !


ಬಿರುಮಳೆಯಲಿ ತಣಿದು 

ಭುವಿ ಈಗ ತಂಪು

ಕಾಣಿರಿದು ನನ್ನೂರಿನ    

ಶರತ್ಕಾಲನ  ಪೆಂಪು ! 

  


  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...