Saturday, 21 November 2020

ಹರಿಯಪಾದಸೇರಿತು ದಾರ !

ಕಟ್ಟಿದ್ದಷ್ಟೇ ನನ್ನ 

ಕಾರ್ಯಭಾರ.  

ಅದರ ಹಣೆಯಲ್ಲಿತ್ತು, 

ಹಾರವಾಗಿ 

ಹರಿಯಪಾದಸೇರಿತು

ದಾರ !

Saturday, 14 November 2020

ಚಿತ್ರ - ಚುಟುಕ - ಬೇಲಿ ಬೆಳೆಯಿತು ! And ತೆಂಗು - ರಂಗು

ನೆಟ್ಟಗಿಡ ನಳನಳಿಸಿ 

ದಟ್ಟವಾಗಿ ಬೆಳೆಯಲೆಂದು 

ಘಟ್ಟಿಯಾದ ಬೇಲಿಯೊಂದ 

ಕಟ್ಟಿದೆವು ಸುತ್ತಲೂ 


ಗಿಡ ಉಳಿಯಲಿಲ್ಲ  

ಬಿಡಿ, ಪರವಾಗಿಲ್ಲ  

ಬೇಲಿಯಾದರೂ 

ಬೆಳೆಯಿತಲ್ಲ ! 






ತೆಂಗು - ರಂಗು 


ಅದೇ ಸಂಜೆ 

ಅದೇ ಸೂರ್ಯ 

ಅದೇ ತೆಂಗು 

ಅದೇ ರಂಗು 

ಅದಕೆ 

ಪ್ರಕೃತಿಯಿತ್ತ ಮೆರಗು 

ಎನಗೆ 

ನಿತ್ಯದ ಬೆರಗು !


Saturday, 7 November 2020

ಅವತರಿಸಿದೆ ಶರತ್ಕಾಲ.

ಶರತ್ಕಾಲ ಕಾಲಿಟ್ಟಂತೆ, ನಾನು ನಿತ್ಯ ಕಾಣುತ್ತಿರುವ  ಚಿತ್ರ. 

ಮಳೆಯಲ್ಲಿ ತೊಳೆದ ಸಸ್ಯರಾಶಿ ಹಚ್ಚಗೆ ನಳನಳಿಸುತ್ತಾ ತೆಳ್ಳನೆಯ ಮಂಜಿನ ಆವರಣದೊಳಗೆ ಮುಸುಗಿದೆ.

ಮಳೆಯಲ್ಲಿ ಮುದುಡಿದ್ದ ಪಾರಿಜಾತದ ಮೊಗ್ಗು, ಈಗ ಬಿರಿದು ಕಂಪು ಹರಡಿದೆ. ಬಾನಲ್ಲಿ ಬೆಳ್ಳಕ್ಕಿಗಳು ಗುಂಪು

ಗುಂಪಾಗಿ ಹಾರುತ್ತಿವೆ. ಮುಂಜಾನೆಯ ತಂಪಿನಲಿ ಹವ್ಯಾಸಿ ಕಲಾವಿದನೊಬ್ಬ ರಸ್ತೆಯ ಬದಿ ಕುಳಿತು ಕೊಳಲ

ವಾದನವನ್ನು  ಕರಗತವಾಗಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾನೆ. ಮುಂಜಾನೆಯ ಅರೆಗತ್ತಲ ಈ

ಪರಿಸರದಲ್ಲಿ ಮನವರಳಿ ನಲಿಯುತ್ತದೆ.   



ಹಚ್ಚ ಹಸುರು ಸಸ್ಯರಾಶಿ 

ಧರೆಯುಟ್ಟ ಉಡುಗೆ.  

ಆವರಿಸಿದೆ ತೆಳು ಮಂಜಿನ 

ಬಿಳಿ ಮೇಲುದೆಯ ತೊಡುಗೆ  


ತಂಪೆಲರಲಿ ಸೂಸುತ್ತಿದೆ   

ಪಾರಿಜಾತದ ಕಂಪು 

ತನ್ನೊಟ್ಟಿಗೆ ಕರೆತಂದಿದೆ   

ಕೊಳಲದನಿ ಇಂಪು 


ಆಗಸದಿ  ಹಾರುತಿದೆ  

ಬಿಳಿ ಬೆಳ್ಳಕ್ಕಿ ಮಾಲೆ 

ಇಟ್ಟಂತೆ  ಮುಂಜಾನೆ  

ಮುಗಿಲಲ್ಲಿ ರಂಗೋಲೆ !


ಬಿರುಮಳೆಯಲಿ ತಣಿದು 

ಭುವಿ ಈಗ ತಂಪು

ಕಾಣಿರಿದು ನನ್ನೂರಿನ    

ಶರತ್ಕಾಲನ  ಪೆಂಪು ! 

  


Wednesday, 28 October 2020

ಕೊಕ್ಕಿಗೆ ಗುಕ್ಕು - ತೆಂಗಿನಹಿಂದೆ ರಂಗು






ತೆಂಗಿನ ಹಿಂಬದಿಯ 

ರಂಗಿನೋಕುಳಿಯಲ್ಲಿ 

ಕಂಗೊಳಿಸಿದ ಸೂರ್ಯ 

ಅಂತರಂಗದಿಂದೆಳೆದ 

ಕವಿಪುಂಗವರ ಸಾಲುಗಳ !


“ಪಟ್ಟಾಗಿ ಕುಡುದ್ಬುಟ್ಟಿ 

ತೂರಾಡ್ತ ತೂಗ್ತಾನೆ 

ಕಣ್ಗಳ್ನ ಕೆಂಪಿಗ್ಮಾಡ್

ತೇಲಿಸ್ತಾನೆ


ಅದಕಂಡು ಬೆಪ್ತಕಡಿ 

ನರಮನ್ಸ ಸೂರ್ಯನ್ನ 

ಅದಕಂತೆ ಇದಕಂತೆ 

ವೋಲಿಸ್ತಾನೆ !”


(ಶ್ರೀ ಜಿ ಪಿ ರಾಜರತ್ನಂ ಅವರ ‘ಸಮಾದಾನ’ ಪದ್ಯದಿಂದ )


 








ಹಕ್ಕಿ 
ಕೊಕ್ಕಗಲಿಸಿದಾಕ್ಷಣ 

ಗುಕ್ಕುಬಾಯಿಗೆ ಬಿತ್ತೇ!






Saturday, 3 October 2020

The Recipe - TPK - Baapu

ಗಾಂಧಿಜಯಂತಿ  ಸರಿಯುವ ಹೊತ್ತಿಗೆ ಶ್ರೀ ಟಿ ಪಿ ಕೈಲಾಸಂ ಅವರ ‘ರೆಸಿಪಿ’ ಪದ್ಯ ನೆನಪಾಯಿತು. 

ತತ್ತ್ ಕ್ಷಣದಲ್ಲಿ ತಿಳಿದಮಟ್ಟಿಗೆ ಕನ್ನಡಕ್ಕಿಳಿಸಿ ಇಲ್ಲಿರಿಸಿದ್ದೇನೆ.  


ಅಂಗೈಲಿಹಿಡಿಸುವಷ್ಟು ಮೂಳೆ, ಚಕ್ಕಳವ ತೆಗೆದುಕೊಂಡು 

ಅದರಲ್ಲಿ ಚಟಾಕಿನಷ್ಟು ರಕ್ತ ಮಾಂಸ ತುಂಬಿರಿ 

ಸಮುದ್ರದುಬ್ಬರವನ್ನು ಹೋಲುವ ಹೃದಯವೊಂದನ್ನಿರಿಸಿರಿ 

ಜತೆಗೆ ಸಮುದ್ರದಾಳದ ಪಾಪಕಾಣದ ಬುಧ್ಧಿಸೇರಿಸಿರಿ

ಎರಡು ಆನೆಕಿವಿ ಅಂಟಿಸಿರಿ, ಮತ್ತೆರಡು ಮಂದ ಕಣ್ಣುಗಳು

ತಾಯ ಎದೆಮೇಲಿನ ಹಸುಗೂಸಿನ ನಗುವ ಬರೆಯಿರಿ

ಹಿಮವತ್ಪರ್ವತದೆತ್ತರದ ಆತ್ಮವ ಒಳಗೆ ತೂರಿಸಿರಿ

ಜೇನಿಳಿಯುವಂಥ ನಾಲಗೆಯೊಂದಾಡುತಿರಲಿ

ಉಳಿದ ಜಾಗವ ಮೇಕೆಹಾಲು ಕಡಲೆಕಾಯಿಂದ ತುಂಬಿ

ಜೈಲಿನೊಳಗೆ ಕೆಲವು ವರುಷ ಬೇಯಿಸಿರಿ 

ಹೊರತೆಗೆದು ಸುತಮುತ್ತ ಹರಿಜನರ ಸಿಂಪಡಿಸಿರಿ 

ಚಿಂದಿಯಲಿ ಮುಚ್ಚಿ, ಒಂದು ಕೋಲ ಒತ್ತಾಸೆಗಿಟ್ಟು ನಿಲ್ಲಿಸಿರಿ

ಇದೋ ಕೊಳ್ಳಿ, ಜಗದೋದ್ಧ್ಹಾರಕ ನಮ್ಮ ‘ಬಾಪು’ವನ್ನು ಬಡಿಸಿರಿ!  


Friday, 25 September 2020

ಮಳೆಗಾಲದ ಮುಂಜಾವು

ಮಳೆಗಾಲವಲ್ಲವೇ ? ಒಂದು ವಾರದಿಂದ ಬಿಡದೆ ಸುರಿಯುತ್ತಿದೆ

ಮಳೆ. ಸುರಿಯುವ ಮಳೆಯಿಂದ ನಮ್ಮ ಬೀದಿಯ ಎಲ್ ಈ ಡಿ

ದೀಪಗಳಿಗೂ  ಥಂಡಿಯಾಗಿ ಅವು ಥಣ್ಣಗೆ ಕಣ್ಮುಚ್ಚಿ ಕುಳಿತಿವೆ.

ನಸುಕಿನಲ್ಲಿ ಐದುಘಂಟೆಯ ಸಮಯ. ಸುರಿಯುತ್ತಿರುವ ಮಳೆ,

ಮಳೆಯಿಂದಾಗಿ ಅಲ್ಲಲ್ಲಿ ಪಾಚಿಕಟ್ಟಿದ ರಸ್ತೆ, ರಸ್ತೆಯಲ್ಲಿ ಹರಿವ ನೀರು,

ಕೃಷ್ಣಪಕ್ಷದ ಕತ್ತಲು, ಅರವತ್ತು ದಾಟಿದ ಕಣ್ಣುಗಳು, ಕಳಚಿಕೊಳ್ಳಲು

ಸಮಯ ಕಾದಿರುವ ಕೈಕಾಲುಗಳು ! ಅವಘಡಕ್ಕೆ ಅಹ್ವಾನವಲ್ಲವೇ?

ಅಲ್ಲದೆ  ನೀರಿನೊಡನೆ ಹಾವೋ ಮತ್ತೊಂದೋ ಕೂಡ

ಹರಿಯುತ್ತಿರಬಹುದು. ಆದರೆ ಅಭ್ಯಾಸ ಬಿಡದು. ಹಾಗೆಂದೇ,

ಒಂದು ಕೈಯಲ್ಲಿ ಕೊಡೆ, ಮತ್ತೊಂದು ಕೈಯಲ್ಲಿ ಕೈದೀಪ (ಟಾರ್ಚ್)

ಹಿಡಿದು  ಸಂಚಾರ ಹೊರಟಿದ್ದೆ. ನನ್ನ ಕೈದೀಪದ ಪ್ರಖರ ಬೆಳಕು 

ಕತ್ತಲನ್ನು ಕತ್ತರಿಸಿ ಹರಿವ ನೀರಿನಮೇಲೆ ಸರಿಯುತ್ತಿತ್ತು. 

ಇದು ಕೆಳಗಿನ ಸಾಲುಗಳ ಸಂಧರ್ಭ. 


ಮಳೆಗಾಲದ ಮುಂಜಾವು 


ಹರಿವ ನೀರಿನ 

ರಂಗಮಂಚದ ಮೇಲೆ 

ಸುರಿವ ವರ್ಷಧಾರೆ 

ಸೃಷ್ಟಿಸಿದೆಯೊಂದು 

ಜಲಲಾಸ್ಯದ ಜಾಲ 


ನೀರ ನರ್ತನಕ್ಕೆ,  

ತಲೆಯ ಮೇಲಿನ 

ಕೊಡೆಯ ಮೇಲ್ಗಡೆ 

ಕುಣಿವ ಹನಿಗಳ 

ಟಪ ಟಪ ತಾಳ 


ಬೆಳಕು ಶಬ್ದಗಳ 

ಈ ಮೇಳಕ್ಕೆ 

ಅಕ್ಕಪಕ್ಕದಲಿ 

ಕಿಕ್ಕಿರಿದಿರುವ 

ಹಸುರಿನಲಿ ಹುದುಗಿರುವ 

ಕೋಟಿ ಕೀಟಗಳ 

ಹಿಮ್ಮೇಳ !


ಮೂರು ಚುಟುಕಗಳು / ದಿನಕರ ದೇಸಾಯಿ

ಸುಪ್ರಭಾತ 


ಬೆಲ್ಲದಂಥ ನಿದ್ದೆಕಳೆದು  

ಮೆಲ್ಲನೆ ಕಣ್ಣ ತೆರೆವಾಗ 

ಗಲ್ಲಿಯ ಮಸೀದಿಯಲ್ಲಿ  

ಅಲ್ಲಾನ ಹೆಸರೆತ್ತಿ  

ಮುಲ್ಲಾ ಕರೆಯುತ್ತಿದ್ದ 

ಎಲ್ಲಾ ಬನ್ನಿರೆಂದು !



ದಿಟವೆನಿಸಿದ್ದನ್ನು, ದಿಟ್ಟವಾಗಿ 

ಎಲ್ಲರಿಗೂ ಎಟಕುವಂತೆ

ನಾಲ್ಕು ಸಾಲುಗಳಲ್ಲಿ ಭಟ್ಟಿಯಿಳಿಸಿ, 

ಚುಟುಕಬರೆದು  ಪುಟದಲ್ಲಿರಿಸಿ 

ಓದುಗರೆಲ್ಲರ ಮನತಟ್ಟಿದ 

ಚುಟುಕುಬ್ರಹ್ಮ ದಿಟ್ಟ ದಿನಕರರಿಗೆ 

ತಟ್ಟುವೆ ಈ ಮೂಲಕ, ನನ್ನ ಚಪ್ಪಾಳೆ !


ಮತ್ತೊಂದು ಚುಟುಕ. ಅದರ  ಹಿನ್ನೆಲೆ ಹೀಗಿದೆ. ನಾನು ಮುಂಜಾನೆ

ಸಂಚಾರಕ್ಕೆ ಹೋಗುವಾಗ  ನನ್ನೊಡನೆ ಕೆಲವು ಸ್ನೇಹಿತರೂ

ಇರುವುದುಂಟು. ವಿವಿಧ ಮನೋಭಾವಗಳ, ಅನೇಕ

ವಯೋಮಾನಗಳ ಮಿತ್ರರ ಗುಂಪು ಅದು. 

ಮೊನ್ನೆ ಬೆಳಗ್ಗೆ ನಾವು ನಡೆಯುತ್ತಿದ್ದಾಗ, ಎದುರಿನ ಗುಡ್ಡಗಳಮೇಲೆ

ಆಗತಾನೇ ಸೂರ್ಯ ಕಾಣಿಸಿಕೊಳ್ಳುತ್ತಿದ್ದ.  ಬಗೆ ಬಗೆಯ ಬಣ್ಣಗಳ

ನಾಟ್ಯ ನಡೆದಿತ್ತು. ಎಲ್ಲರೂ ಅದನ್ನು ನೋಡಿ ಮೆಚ್ಚಿ  

ಮಾತನಾಡುತ್ತಿದ್ದಾಗ, ಒಬ್ಬ ತರುಣ ಮಿತ್ರ, ಎದುರಿನಿಂದ

ಬರುತ್ತಿದ್ದ ತರುಣಿಯ ಕಡೆ ನೋಡುತ್ತಾ ಹೇಳಿದ 

“ಸೂರ್ಯೋದಯಕ್ಕಿಂತ ಸುಂದರವಾದದ್ದು ಬೇಕಾದಷ್ಟಿದೆ !”  

ಆ ಮಾತಿನಿಂದ ಪ್ರೇರಿತವಾದದ್ದು ಈ ಚುಟುಕ. 

ಪ್ರಾಸಬದ್ಧವಾದ ಒಂದು ವಿನೋದವಷ್ಟೇ. ಮತ್ತೇನೂ ಅಲ್ಲ. 

 


ದೂರಬೆಟ್ಟಗಳ ಹಸಿರು ಶಿಖರಗಳ 

ಎತ್ತರದ ಸುತ್ತಮುತ್ತ 

ನೆರೆದ ಮೇಘಗಳೊಡನೆ ಎಳೆರವಿಯ ಕಿರಣಗಳ 

ಬಗೆಬಗೆಯ ರಂಗಿನಾಟ 

ದಿನಮಣಿಯ ಕಂಡು ಮನ ತಣಿಯಲೆಂದು 

ಭಗವಂತ  ಕಣ್ಗಳಿತ್ತ. 

ಅವನಿತ್ತ ಕಣ್ಣು ಕುಣಿಯುತ್ತಲಿತ್ತು   

ಲಲನಾಮಣಿಯ ಸುತ್ತಮುತ್ತ 






  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...